ಸುಳ್ಯ:ಸುಳ್ಯ ತಾಲೂಕಿನ ಕೊಡಿಯಾಲಬೈಲ್ ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಾ.12ರಂದು ನಡೆದಿದೆ.
ಮೃತರನ್ನು ಮಂಜು(42) ಎಂದು ಗುರುತಿಸಲಾಗಿದ್ದು, ಇವರು ಕನ್ನಡ ಉಪನ್ಯಾಸಕರಾಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆರಂಭದಲ್ಲಿ ಹೈಸ್ಕೂಲ್ ನಲ್ಲಿ ಪಾಠ ನಿರ್ವಹಿಸುತ್ತಿದ್ದ ಇವರು ಕಾಲೇಜಿಗೆ ಭಡ್ತಿ ಪಡೆದಿದ್ದರು. ಮೂಲತಃ ಇವರು ಕೆ.ಆರ್. ನಗರದವರು. ಇಂದು ಮಧ್ಯಾಹ್ನ ಕಾಲೇಜಿನ ಸಿಬ್ಬಂದಿ ಜೊತೆ ಚೆನ್ನಾಗಿಯೇ ಮಾತನಾಡಿದ್ದರು.
ನನಗೆ ಸ್ವಲ್ಪ ಹುಷಾರಿಲ್ಲ ಎಂದು ಹೇಳಿಕೊಂಡು ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಅಲ್ಲಿಂದ ಬಳಿಕ ಅವರು ಔಷಧಿಗಾಗಿ ಮೆಡಿಕಲ್ ಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಶ್ರೀರಾಂ ಪೇಟೆಯ ಬಳಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಠಾತ್ ಸಾವಿನಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.



































