ಶರಧಿ ಕೋಪದಿಂದಲೇ ದಡ ದಡನೇ ಕಛೇರಿಯ ಒಳಗೆ ನುಗ್ಗಿ ದೊಪ್ಪನೆ ಕುಸಿದು ತನ್ನ ಕುರ್ಚಿಗೆ ಒರಗಿ ಕಣ್ಣು ಮುಚ್ಚಿಕೊಂಡಳು. ಕೆಕ್ಕರಿಸಿ ನೋಡುವ ಆತನ ಮುಖವೇ ಕಣ್ಣ ಮುಂದೆ ನಗುತ್ತಿದೆ. ಅಸಹಾಯಕಳಾಗಿ ಕಣ್ಣೀರು ಅರಿವಿಲ್ಲದೆ ಜಾರುತ್ತಿದೆ. ತಾನೊಬ್ಬಳು ವಿಧವೆ ಎಂಬ ಅರಿವು ತನಗಿದೆ ಆದರೆ ಅರಿವಿರದೆ ಆತನ ಪ್ರೇಮಪೂರಿತ ದೃಷ್ಟಿ ದಿನ ದಿನವೂ ಕೊಲ್ಲುತ್ತಿದೆ. ಇಂದು ಕೂಡ ಬಸ್ ಸ್ಟ್ಯಾಂಡ್ ನಲ್ಲಿ ಕಾಯುತ್ತ ಕುಳಿತಿದ್ದ ಮನಸ್ಸು ಒಂದು ಕ್ಷಣ ವಿಚಲಿತಗೊಂಡರೂ ಸಂಭಾಳಿಸಿಕೊಂಡು ಕಷ್ಟಪಟ್ಟು ಸಮಾಜಕ್ಕೆ ಹೆದರಿ ನಗುವನ್ನು ಮಾಸಿ ಕೋಪದ ಮುಖದಲ್ಲೆ ಪರಿಚಿತಳು ನಮ್ಮ ಶರಧಿ.
ಇಂದು ಕಛೇರಿಯಲ್ಲಿ ಸಂಭ್ರಮದ ವಾತಾವರಣ ಕಾರಣ ಇಷ್ಟೆ ಹಳೆಯ ಬಾಸ್ಗೆ ದೂರದ ದೆಹಲಿಗೆ ಟ್ರಾನ್ಸ್ ಫರ್ ಆಗಿತ್ತು. ಹೊಸ ಬಾಸ್ ನ ಆಗಮನಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಆದರೆ ನಮ್ಮ ಶರಧಿ ಬೇರೆ ವಿಷಯಗಳಲ್ಲಿ ಅನಾವಶ್ಯಕ ತಲೆ ಹಾಕುವವಳಲ್ಲ. ತನ್ನ ಕೆಲಸ ಆಯ್ತು ತಾನು ಆಯ್ತು ಎಂಬ ನಿರ್ವಿಕಾರದಲ್ಲೇ ಬಣ್ಣ ರಹಿತ ಬದುಕಲ್ಲೆ ಮರಗಟ್ಟಿರುವವಳು. ಗೆಳತಿ ಸಮನ್ವಿತಾ ಶರಧಿಯನ್ನು ಗೋಳು ಹೊಯ್ದುಕೊಳ್ಳುವುದರಲ್ಲಿ ಎತ್ತಿದ ಕೈ ಅಪ್ರತಿಮ ಸುಂದರಿ ಸಮನ್ವಿತಾಳಿಗೆ ಸ್ವಲ್ಪ ಜಂಬ ಹೆಚ್ಚು. “ಹೋಯ್ ಶರು ಇವತ್ತು ಆದರೂ ಸ್ವಲ್ಪ ಮುಖದಲ್ಲಿ ನಗು ಇರಬಾರದೇ” ಎಂದಳು ಸಮನ್ವಿತಾ.
ಶರಧಿ ಸಿಸ್ಟಮ್ ನೋಡಿಕೊಂಡೆ “ಬಿಡು ಸಮ್ಮು ನಮ್ಮ ಸೌಂದರ್ಯಕ್ಕೆ ನಗು ಬೇರೆ ಕೇಡು” ಉಢಾಫೆಯಲ್ಲೆ ಉತ್ತರಿಸಿದಳು.
“ಸರಿ ಬಿಡು ನಿನ್ನ ಲೈಫ್ ನಿನ್ನ ಇಷ್ಟ ನನಗೇನು ಕಷ್ಟ” ಎನ್ನುತ್ತಾ ಹಾರಿ ಹೋದಳು ಗೆಳೆಯ ಸಂತು ಬಳಿಗೆ ಇಬ್ಬರೂ ಏನೋ ಸಾಧನೆ ಮಾಡಿದಂತೆ ಕಾಲ ಹರಣ ಮಾಡುತ್ತಾ ನಗುತ್ತಿದ್ದರು. ಹೊರಗೆ ಕಾರ್ ಬಂದ ಶಬ್ದಕ್ಕೆ ಎಲ್ಲರೂ ಗಪ್ ಚುಪ್ ಆದರು. ಶರಧಿ ಯಾಕೋ ಇಹದ ಪರಿವೇ ಇಲ್ಲದೆ ಪರಿಚಯವಿಲ್ಲದ ಅದೇ ಮುಖವನ್ನು ಕಾಣುತ್ತಿದ್ದಳು. ಅರಿವಿಲ್ಲದೆ ತುಟಿಯಂಚಿನಲ್ಲಿ ಸಣ್ಣ ನಗುವೊಂದು ಚಿಮ್ಮಿ ಮರೆಯಾಯಿತು. ಹೊಸ ಬಾಸ್ ಅರೆಕ್ಷಣ ಆಕೆಯ ನಗುವನ್ನೇ ಕಣ್ಣು ತುಂಬಿಸಿಕೊಂಡು ಒಳಗಡಿಯಿಟ್ಟರು. ಇದ್ಯಾವುದರ ಪರಿವೇ ಇಲ್ಲದೆ ಶರಧಿ ಸಿಸ್ಟಮ್ ನಲ್ಲಿ ಈ-ಮೈಲ್ ಚೆಕ್ ಮಾಡುತ್ತಿದ್ದಳು.
ಸ್ಪುರದ್ರೂಪಿ ಬಾಸ್ ನ ನೋಡಿ ಸಮನ್ವಿತಾಗೆ ಏನೋ ಖುಷಿ ಹಾರ್ಟ್ ಲಿ ವೆಲ್ ಕಮ್ ಸರ್ ಅಂತ ವೈಯಾರದಲ್ಲೇ ಬೀಗಿದಳು. ಪ್ರತಿ ಮುಗುಳುನಕ್ಕು ಥ್ಯಾಂಕ್ಯೂ ಅಂತ ಹೇಳಿ ಸಿಸ್ಟಮ್ ಚೆಕ್ ಮಾಡುತ್ತಿದ್ದ. ಸೆಂಡ್ ಮೈಲ್ ನಲ್ಲಿ ಸಬ್ಜೆಕ್ಟ್ ಹೆಸರಿಲ್ಲದೆ ಸೆಂಡ್ ಆಗಿರೋ ಮುಖ್ಯವಾದ ರಿಪೋರ್ಟ್ ನೋಡಿ ರಪ್ಪನೆ ರೇಗಿದ ಮಾಡೋ ಕೆಲಸದ ಮೇಲೆ ಏಕಾಗ್ರತೆ ಇಲ್ಲದಿದ್ದರೆ ಯಾಕೆ ಬರ್ತೀರಿ ನೀವೆಲ್ಲ ಅಂತ ಶುರು ಆಯ್ತು. ಸಮನ್ವಿತಾ ಬಾಸ್ ಬಳಿ “ಅದು ನಾನಲ್ಲ ಸರ್ ಶರಧಿ ಮೈಲ್ ಮಾಡಿದ್ದು” ಅಂತ ವೈಯಾರದಲ್ಲೆ ಹೇಳಿದಳು. “ಶರಧಿ..” ಬಾಸ್ ನ ಕಂಚಿನ ಕಂಠಕ್ಕೆ ಒಮ್ಮೆ ಬೆಚ್ಚಿ ಬಿದ್ದು ಚೇಂಬರ್ ಒಳಗೆ ಬಂದು ಏನು ಕರೆದ್ರಿ ಎಂದು ಮುಖ ನೋಡಲು ಅದೇ ಬಸ್ ಸ್ಟ್ಯಾಂಡ್ ಯುವಕ ರೌದ್ರ ನಿಲ್ಲಿಸಿ ಮಂದಹಾಸಕ್ಕೆ ಹರಸಾಹಸ ಪಡುತ್ತಾ ಎದ್ದು ನಿಂತ. “ಪ್ಲೀಜ್ ಕುಳಿತುಕೊಳ್ಳಿ” ಎಂದು ಚೆಯರ್ ತೋರಿಸಿದ. ಭಯದಲ್ಲೆ ಕುಳಿತಳು ಏನೆನ್ನುತ್ತಾನೋ ಎಂದುಕೊಂಡಳು ಮನದಲ್ಲಿ. “ನೋಡಿ ನಾವು ಮಾಡುವ ಕೆಲಸದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರಿಕೆಯಲ್ಲಿ ಕೆಲಸವನ್ನು ನಿರ್ವಹಿಸಬೇಕು ಯಾವಾಗ ಕಾರ್ಯದಲ್ಲಿ ನೈಪುಣ್ಯತೆಯ ಅರಿವು ತಮಗೆ ಆಗುತ್ತದೆಯೋ ಅಂದು ಕೆಲಸದಲ್ಲಿ ತಪ್ಪಾಗುವುದಿಲ್ಲ ಹಾಗೂ ಎಲ್ಲರಿಗೂ ನಂಬಿಕೆಯ ಅಧಿಕಾರಿಗಳಾಗಿ ಬೆಳೆಯುತ್ತೇವೆ” ಎಂದು ಹಿತನುಡಿಯನ್ನು ಹೇಳಿ ಕಳುಹಿಸಿದ. ಸಮನ್ವಿತಾ ಕಿವಿ ಬಾಸ್ನ ಕೋಣೆಯ ಒಳಗೆ ಇತ್ತು ಆದರೆ ಗ್ಸಾಸ್ ಪರದೆಯಾಗಿದ್ದರಿಂದ ಹೊರಗೆ ಸಂಬಾಷಣೆ ಕೇಳಿಸುವುದಿಲ್ಲ. “ಶರು ಬೇಜಾರ್ ಮಾಡ್ಕೋಬೇಡ ಹೊಸ ಬಾಸ್ ನಿನಗೆ ಫಸ್ಟ್ ಕ್ಲಾಸ್ ತಗೊಂಡ್ರು” ಅಂತ ಪಕ್ಕನೆ ನಕ್ಕು ಹೇಳಿದಳು. ಶರಧಿ ಸುಮ್ಮನೆ ತನ್ನ ಪಾಡಿಗೆ ಗರಡು ಕಂಬದಂತೆ ಕಂಪ್ಯೂಟರ್ ಮುಂದೆ ಕುಳಿತಿದ್ದಳು.
ಮಧ್ಯಾಹ್ನ ಎಲ್ಲರೂ ಊಟಕ್ಕೆ ಕ್ಯಾಂಟಿನ್ ಗೆ ತೆರಳಿದರು ಶರಧಿ ಮಾಮೂಲಿ ತನ್ನ ಟಿಫಿನ್ ಬ್ಯಾಗ್ ಹಿಡಿದುಕೊಂಡು ಕೈ ತೊಳೆಯಲು ಹೊರಟರೆ ಬಾಸ್ ಆವಾಗ್ಲೆ ಊಟಕ್ಕೆ ಹೊರಡುತ್ತಿದ್ದರು. “ಶರಧಿ ಬನ್ನಿ ಒಟ್ಟಿಗೆ ಊಟ ಮಾಡೋಣ” ಅಂದ್ರು. ಇಲ್ಲ ಸರ್ ನಾನು ಹೊರಗಡೆ ಊಟ ಮಾಡಲ್ಲ ಮನೆಯಿಂದಲೇ ತರ್ತಿನಿ ತಾವು ಹೋಗಿ ಬನ್ನಿ ಸರ್ ವಿನಯವಾಗಿಯೇ ನಿರಾಕರಿಸಿದಳು. ಸುಮ್ಮನೆ ಹಾಡು ಗುಣು ಗುಟ್ಟುತ್ತಾ ಹೊರಟ. ಅಲ್ಲೇ ಸೈಡ್ ನಲ್ಲಿ ಇದ್ದ ಸಮನ್ವಿತಾ ತನ್ನನ್ನು ಕರೆದುಕೊಂಡು ಹೋಗಬಹುದೆಂಬ ಆಸೆಯಲ್ಲಿ ಸಂತುಗೆ ಬೈ ಹೇಳಿ ಬಾಸ್ ನ ದಾರಿ ಕಾಯುತ್ತಿದ್ದಳು. ಬಾಸ್ ತನ್ನದೇ ಲೋಕದಲ್ಲಿ ಕಾರ್ ನಲ್ಲಿ ಕೂತು ದೀರ್ಘ ಉಸಿರು ಎಳೆದುಕೊಂಡು ರಿಲಾಕ್ಸ್ ಆಗಿ ಊಟಕ್ಕೆ ಹೊರಟ.
ಶಶಾಂಕ್ ಸಣ್ಣ ವಯಸ್ಸಿನಲ್ಲೆ ತಂದೆ ತಾಯಿಯವರನ್ನು ಕಳೆದುಕೊಂಡು ಅನಾಥಾಶ್ರಮದಲ್ಲೇ ಬೆಳೆದ ಹುಡುಗ. ಎಳವೆಯಲ್ಲೆ ಓದಿ ಒಳ್ಳೆಯ ಅಧಿಕಾರಿಯಾಗಬೇಕೆಂಬ ಅದಮ್ಯ ಬಯಕೆ ಆತನ ಇಚ್ಚೆಯಂತೆ ಒಳ್ಳೆ ಕಾಲೇಜ್ ನಲ್ಲಿ ಉತ್ತಮ ಅಂಕಗಳಿಸಿ ಪಾಸಾಗಿದ್ದ. ಸಣ್ಣ ಕಛೇರಿಯಲ್ಲಿ ಕೆಲಸ ನಿರ್ವಹಿಸಿ ಚಿಕ್ಕ ಮನೆ ಖರೀದಿಸಿ ಅದರಲ್ಲೇ ವಾಸಿಸುತ್ತಿದ್ದ. ಕೆಲಸದ ಭೇಟೆಯಲ್ಲಿದ್ದಾಗ ತಾನು ನಡೆದುಕೊಂಡು ಹೋಗುವ ದಾರಿಯ ಮಧ್ಯದಲ್ಲಿ ಸಿಗುವ ಬಸ್ ಸ್ಟ್ಯಾಂಡ್ ನಲ್ಲಿ ಸೌಮ್ಯ ಸ್ವಭಾವದ ಶರಧಿಯನ್ನು ನೋಡಿ ಮನಸಾರೆ ಹೃದಯದ ಒಳಗೆ ಬಚ್ಚಿಟ್ಟಿದ್ದ. ದಿನಾ ಅವಳನ್ನು ನೋಡದೆ ಅಂದಿನ ಕೆಲಸವನ್ನು ಮಾಡಲು ಉತ್ಸಾಹ ಇರುತ್ತಿರಲಿಲ್ಲ. ಹಾಗಾಗಿ ಸುಮ್ಮನೆ ಬಸ್ ಸ್ಟ್ಯಾಂಡ್ ನಲ್ಲಿ ಕುಳಿತುಕೊಂಡು ಬಿಡುತ್ತಿದ್ದ. ಶರಧಿ ಬಸ್ ಗೆ ಹತ್ತಿದ ಮೇಲೆ ತಾನು ಮನೆಗೆ ಬರುತ್ತಿದ್ದನು.
ಆದರೆ ಇಂದೇಕೋ ಇನ್ನು ಬಸ್ ಸ್ಟ್ಯಾಂಡ್ ಗೆ ಹೋಗುವ ಅಗತ್ಯ ಇಲ್ಲ ಆಫೀಸ್ ನಲ್ಲಿಯೇ ತಾನು ಮೆಚ್ಚಿದ ಹೃದಯದ ಹತ್ತಿರ ಇರಬಹುದೆಂಬ ಕಲ್ಪನೆಯೇ ಆತನ ಖುಷಿಯನ್ನು ಹೆಚ್ಚಿಸಿತ್ತು…
ಶರಧಿ ದಾಪುಗಾಲು ಇಡುತ್ತಾ ಬಸ್ ಸ್ಟ್ಯಾಂಡ್ಗೆ ಬಂದಳು ಆದರೆ ಇಂದೇಕೋ ಆತನ ಕಣ್ಗಾವಳು ಇಲ್ಲದೆ ಮನಸ್ಸು ನಿರಾಳವೆನಿಸಿತು. ಕಛೇರಿಯ ಒಳಗೆ ಕಾಲಿಟ್ಟಂತೆ ಸಮನ್ವಿತಾ ಈಗಾಗಲೇ ಬಂದಿದ್ದಳು “ಗುಡ್ ಮಾರ್ನಿಂಗ್ ಸಮ್ಮು” ಎನ್ನುತ್ತಾ ತನ್ನ ಚಯರ್ ಮೇಲೆ ದೊಪ್ಪನೆ ಕುಳಿತುಕೊಂಡಳು. ಸಮನ್ವಿತಾ “ಹಾಯ್ ಶರು ಯಾಕೋ ಶರು ಬಾಸ್ ಇನ್ನು ಬಂದಿಲ್ಲ” ಬೇಜಾರ್ ನಲ್ಲೆ ಹೇಳಿದಳು. “ಹುಂ” ಅಂದು ನಸುನಕ್ಕಳು ಶರಧಿ ಆಗಲೇ ಶಶಾಂಕ್ ಒಳಗಡಿಯಿಟ್ಟು ಪ್ರತಿಮುಗುಳು ನಕ್ಕು “ಗುಡ್ ಮಾರ್ನಿಂಗ್ ಎವ್ವರಿಬಡಿ. ಸಮನ್ವಿತಾ ನನ್ನ ಛೇಂಬರ್ ಗೆ ಬನ್ನಿ” ಗಂಭೀರವಾಗಿ ಒಳಗೆ ಹೋದ. “ಸರ್ ಬಂದೆ” ನಿರಾಯಾಸವಾಗಿ ಸಿಕ್ಕ ಅವಕಾಶವನ್ನು ಬಿಡುವಳೇ. “ನೋಡಿ ನಾಳೆ ಹೆಡ್ ಆಫೀಸ್ ನಲ್ಲಿ ಮುಖ್ಯವಾದ ಮೀಟಿಂಗ್ ಇದೆ ನೀವು ಭಾಗವಹಿಸಿ ವರದಿ ಒಪ್ಪಿಸಬೇಕು” ಅಂತ ಹೇಳೀ ಕರ್ತವ್ಯದಲ್ಲಿ ನಿರತನಾದ ಸೈಲೆಂಟ್ ಹುಡುಗ ನಮ್ಮ ಶಶಾಂಕ್. ಈಕೆಯೋ ಮಾತಿನ ಮಲ್ಲಿ ಸುಮ್ಮನೆ ಕೂರುವ ಜಾಯಾಮಾನವಲ್ಲ “ಸರ್ ನಾಳೆ ನೀವು ಬರುವಿರೋ ನಾವಿಬ್ಬರೂ ಜೊತೆಯಾಗೆ ಹೋಗುವುದೇ” ಎಂದಳು ಖುಷಿಯಲ್ಲೆ. “ಇಲ್ಲ ನನಗೆ ಕಛೇರಿಯಲ್ಲಿ ಮುಖ್ಯವಾದ ಕೆಲಸ ಇದೆ ನೀವು ಮ್ಯಾನೇಜ್ ಮಾಡ್ಕೊಂಡು ಬನ್ನಿ” ಹೇಳಿ ಸುಮ್ಮನಾದ. ಸಮ್ಮುಗೆ ನಿರಾಶೆಯಾಗಿ “ನನ್ನ ಜೊತೆ ಬಂದರೆ ಇವನ ಗಂಟು ಏನು ಸವೆದು ಹೋಗುವುದೋ” ಗುಣುಗುಟ್ಟುತ್ತಾ ಬಂದು ಚಯರ್ ನಲ್ಲಿ ಕುಕ್ಕಿ ಕುಳಿತಳು.
ಇದ್ಯಾವುದರ ಪರಿವೆ ಇಲ್ಲದೆ ಶರು ಕೆಲಸದಲ್ಲೆ ಮಗ್ನವಾಗಿದ್ದಳು. “ಶರಧಿ ಬನ್ನಿ ಇಲ್ಲಿ” ಜೋರಾಗೆ ಕರೆದ. ಶರಧಿ ಮೆಲ್ಲನೆ ಬಾಸ್ ಚೇಂಬರ್ ಒಳಗೆ ಬಂದಳು ”ಸರ್” ಎಂದಳು ಮೆಲ್ಲನೆ ಶರಧಿ. “ ಬನ್ನಿ ಶರಧಿ.. ನಾನು 10 ದಿನ ಕಛೇರಿಗೆ ಬರುವುದಿಲ್ಲ ನೀವು ಕಛೇರಿಯ ಜವಬ್ದಾರಿಯನ್ನು ವಹಿಸಿಕೊಳ್ಳ ಬೇಕು” ಎಂದನು ಶಾಂತವಾಗಿ.
“ನಾನು 2 ದಿನ ರಜೆ ಹಾಕಬೇಕೆಂದಿರುವೆ ಸರ್ ತುಂಬಾ ಅಗತ್ಯ ಇದ್ದರೆ ಪರವಾಗಿಲ್ಲ ರಜೆಯನ್ನು ಮುಂದಕ್ಕೆ ಹಾಕುತ್ತೇನೆ” ಎಂದಳು ಉಗುಳು ನುಂಗುತ್ತಾ ಶರಧಿ. “ರಜೆ ಬೇಕಾದರೆ ಮೊದಲೇ ತಿಳಿಸಬೇಕು ನೀವು ಈಗ ಹೇಳಿದ್ರೆ ಆಗುತ್ತಾ” ಎಂದನು ಗಡಸಾಗಿ. ಮೊದಲೇ ನೋವಲ್ಲಿ ನೊಂದಿರುವ ಶರಧಿ ಅಳುಧ್ವನಿಯಲ್ಲಿ “ಆಯ್ತು ಸರ್ ನಾನು ರಜೆ ಮಾಡುವುದಿಲ್ಲ ನೀವು ಹೋಗಿ ಬನ್ನಿ ನಾನು ಜವಬ್ದಾರಿಯನ್ನು ವಹಿಸಿಕೊಳ್ಳುವೆ” ಎಂದಳು ಅದಾಗಲೇ ಕಂಬನಿ ಕಣ್ಣು ಜಾರಿ ಕನ್ನೆ ಮೇಲೆ ಹರಿಯಿತು. ಗಂಡನ ಮರಣದ ದಿನ ವಾಗಿದ್ದುದರಿಂದ 2 ದಿನ ರಜೆ ಮಾಡಿ ಅನಾಥಾಶ್ರಮದ ಮಕ್ಕಳಿಗೆ ಸಿಹಿ ಹಂಚಿ ಸಂತೋಷದ ನೆನಪನ್ನು ಹೊತ್ತೊಯ್ಯಬೇಕೆಂದು ಬಯಸಿದ್ದಳು. “ಯಾಕೆ ಶರಧಿ ಏನಾಯಿತು ಯಾಕೆ ಈ ಕಂಬನಿ ಬದುಕಲ್ಲಿ ಕಾಣುವ ಕಂಬನಿಗಿಂತ ಕಾಣದೆ ಬರಿದಾದ ಕಣ್ಣು ಏನನ್ನೋ ಹೇಳುತ್ತಿದೆ. ಏನಾಯಿತು” ಎಂದು ಪ್ರೀತಿಯಿಂದಲೇ ಕೇಳಿದ. ಯಾಕೋ ಎದೆಯನ್ನು ಹಿಂಡಿದ ನೆನಪನ್ನು ಈತನ ಜೊತೆ ಹೇಳಬಹುದೋ ಅಥವಾ ಸುಮ್ಮನೆ ಲೇವಡಿಗೆ ಈಡಾಗುವೆನೇನೋ ಎಂಬ ಸಂಶಯದಲ್ಲೆ ಸುಮ್ಮನಾದಳು ಶರಧಿ.
ಕಛೇರಿ ಹುಡುಗನನ್ನು ಕರೆದು ಕಾಫಿಯನ್ನು ತರಿಸಿದ. ನಿಧಾನವಾಗಿ ಕಾಫಿಯನ್ನು ಹೀರುತ್ತಾ “ಶರಧಿ” ಅಪ್ಯಾಯತೆಯಿಂದ ಕೂಗಿದ. ಏನೆಂದು ತಲೆ ಎತ್ತಿ ನೋಡಿದಳು ಶರಧಿ. “ನಿನ್ನಂತೆ ನಾನು ಕೂಡ ಅದೃಷ್ಟ ಹೀನ” ನೋವಲ್ಲೆ ಹೇಳಿ ಸುಮ್ಮನಾದ. ಆತನ ಮಗುವಂತ ಮುಖ ನೋಡಿ ತಬ್ಬಿ ಸಮಾಧಾನ ಮಾಡಬೇಕೆಂದು ಬಯಸಿತು ಶರಧಿಯ ತಾಯಿ ಮನಸ್ಸು. ಕರಾಳ ಮೌನ ಅಸಹನೀಯವೆನಿಸಿ “ಸರ್ ನಿಮ್ಮ ನೋವನ್ನು ನನ್ನ ಜೊತೆ ಹಂಚಿಕೊಳ್ಳಬಹುದು ಎಂದಾದರೇ ಹೇಳಿ ಬಿಡಿ” ಎಂದಳು ತಾಯಿಯಂತೆ. “ಶರಧಿ ಎಲ್ಲರೂ ಸುಖವನ್ನೇ ಪಡೆಯಬೇಕೆಂದು ಬಯಸುತ್ತಾರೆ ಆದರೆ ನೀವು ನನ್ನ ನೋವನ್ನು ಹಂಚಿಕೊಳ್ಳಲು ತಯಾರಾಗಿರುವಿರಾ?” ಅಯ್ಯೋ “ಹೌದು” ಎಂದರೆ ಎಲ್ಲಿ ಅಪಾರ್ಥವಾಗಬಹುದೋ ಎಂಬ ಜಿಜ್ಞಾಸೆಯಲ್ಲಿ ಬಿದ್ದಳು “ಇಲ್ಲ” ಎಂದು ಹೇಗೆ ಹೇಳುವುದು ಏನೆಂದೂ ಅರಿಯದೆ ಸುಮ್ಮನಾದಳು ಶರಧಿ. ಆಕೆಯ ಮೌನ ಕಂಡು “ನೋಡಿ ನಾನು ತಂದೆ ತಾಯಿಯರ ಪ್ರೀತಿಯನ್ನು ಕಾಣದೆ ಬೆಳೆದವನು. ನೀವು ಆ ಪ್ರೀತಿಯನ್ನು ನನಗೆ ನೀಡುವುದೇ ಆದರೇ ನಾನು ನಿಮ್ಮನ್ನು ನನ್ನ ಅರಮನೆಗೆ ಕರೆದುಕೊಂಡು ಹೋಗಬೇಕೆಂದು ಕೊಂಡಿರುವೆ. ತಾವು ದೊಡ್ಡ ಮನಸ್ಸು ಮಾಡಿ ನನ್ನ ಮನೆ ಮನಸ್ಸು ಬೇಳಗುವ ದೇವತೆ ಆಗುವಿರಾ?” ಪ್ರೀತಿಯಿಂದಲೇ ಬೇಡಿಕೊಂಡ. “ಸರ್ ನಾನು ಗಂಡನನ್ನು ಕಳೆದುಕೊಂಡ ಅಸಹಾಯಕ ಹೆಣ್ಣು ನನ್ನಿಂದ ನಿಮಗೆ ಪ್ರೀತಿ ಪಡೆಯಲು ಸಾಧ್ಯವೇ? ನಿಮ್ಮ ಒಳ್ಳೆಯ ಗುಣಕ್ಕೆ ಸರಿ ಸಮಾನವಾದ ಹುಡುಗಿ ಸಿಗಬಹುದು. ನನ್ನಿಂದ ಇದು ಅಸಾಧ್ಯ” ಎಂದಳು ಆತನ ಮುಖವನ್ನು ನೋಡಲಾಗದೇ ಬೇರೆಡೆಗೆ ನೋಡುತ್ತಿದ್ದಳು. “ ಶರಧಿ ನೀವು ನನ್ನ ಪ್ರೀತಿಗೆ ಕರಗಲೇಬೇಕು ಇದು ಭಿಕ್ಷೆ ಎಂದು ತಿಳಿದುಕೊಳ್ಳಿ” ಎಂದನು ಆಕೆ ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬುದೇ ಚಡಪಡಿಕೆ. ಏನೂ ದಾರಿ ಕಾಣದೆ ಕುಸಿದು ಕುಳಿತ. ಮೊದಲ ಪ್ರೀತಿ ಮೊದಲ ಪ್ರೇಮ ಮೊದಲ ಬಯಕೆ ಎಲ್ಲವೂ ಕೊನೆಯಾದಂತೆ ಭಾಸವಾಗುತ್ತಿದೆ. ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆ ಕಣ್ಣು ಮಂಜಾಗುತ್ತಿದೆ ದೊಪ್ಪನೆ ಬಿದ್ದನು. ಒಂದು ಕ್ಷಣ ಶರಧಿ ಗರಬಡಿದಂತೆ ನಿಂತಲ್ಲೇ ಆತನ ಮೇಲೆ ಅಂಗಾತ ಬಿದ್ದಳು. ಸಾವಿನ ನಂತರ ದೇಹ ಒಂದಾಯಿತು. ಇಬ್ಬರ ಆತ್ಮ ಲೀನವಾಯಿತು. ಪ್ರೀತಿ ಮರೀಚೀಕೆಯಾಯಿತು.
✍️ಅಕ್ಷತಾ ನಾಗನಕಜೆ
ಕಥೆ, ಪ್ರೀತಿ..,
