ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಬ್ರಹ್ಮರಥೋತ್ಸವವು ಜ.19 ರಂದು ರಾತ್ರಿ ವೈಭವದಿಂದ ನಡೆಯಿತು.
ಕ್ಷೇತ್ರದ ತಂತ್ರಿ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ವಸಂತಕಟ್ಟೆ ಪೂಜೆ ನೆರವೇರಿತು.
ವ್ಯಾಘ್ರಚಾಮುಂಡಿ ದೈವ(ಪಿಲಿಭೂತ)ದ ಭಂಡಾರ ಆಗಮಿಸಿತ್ತು. ಅಲ್ಲಿಂದ ದೈವದ ಭಂಡಾರ ಸಹಿತವಾಗಿ ದೇವರ ಬಲಿ ದೇವಾಲಯದ ರಥ ಬೀದಿಯ ಬಳಿಯಲ್ಲಿನ ಅಲಂಕೃತ ಬ್ರಹ್ಮರಥದ ಬಳಿ ಆಗಮಿಸಿತ್ತು. ಈ ವೇಳೆ ದೈವ-ದೇವರ ಮುಖಾಮುಖಿ ನಡೆಯುವ ಅಪೂರ್ವ ದೃಶ್ಯವನ್ನು ಭಕ್ತರು ಕಣ್ಣುಂಬಿಸಿಕೊಂಡರು. ದೈವದ ಅಭಯದ ನುಡಿಯೊಂದಿಗೆ ಜಲದುರ್ಗಾದೇವಿ ರಥವನ್ನೇರಿ ತಂತ್ರಿಗಳ ನೇತೃತ್ವದಲ್ಲಿ ಪೂಜೆ ವಿಧಿ ವಿಧಾನಗಳು ನಡೆದವು.
ರಥಬೀದಿಯಲ್ಲಿ ವ್ಯಾಘ್ರಚಾಮುಂಡಿ ದೈವ ಅದರ ಹಿಂದೆ ಬ್ರಹ್ಮರಥ ತೆರಳಿತು. ರಥ ಸಂಚರಿಸಿ ಮೂಲಸ್ಥಾನದ ತನಕ ಬರುವ ತನಕವು ವ್ಯಾಘ್ರಚಾಮುಂಡಿ ದೈವ ಬ್ರಹ್ಮರಥದ ಜತೆಗೆ ಹೆಜ್ಜೆ ಹಾಕಿತ್ತು. ರಥವು ರಥ ಬೀದಿಯಲ್ಲಿ ಸಂಚರಿಸಿ ಮರಳಿ ಬಂದು ದೈವ- ದೇವರು ಮುಖಾಮುಖಿಗೊಡು ರಥೋತ್ಸವ ಸಂಪನ್ನಗೊಂಡ ಬಳಿಕ ದೇವರ ಬಲಿ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಿತು.
ರಥ ಎಳೆಯಲು ಸಾಂಪ್ರದಾಯಿಕ ಉಡುಗೆ ಬ್ರಹ್ಮರಥ ಎಳೆಯುವ ಭಕ್ತಾ,ಗಳಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಪಾಲ್ಗೊಳ್ಳಲು ಮಾತ್ರ ಅವಕಾಶ ನೀಡಲಾಗಿತ್ತು. ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ನೇತೃತ್ವದ ರಥ ನಿರ್ಮಾಣದ ಶಿಲ್ಪಿಗಳ ತಂಡ ಬ್ರಹ್ಮರಥ ಸಂಚಾರದ ನಿರ್ವಹಣಾ ಜವಾಬ್ದಾರಿ ವಹಿಸಿತ್ತು. ನೂರಾರು ಭಕ್ತರು ರಥ ಎಳೆದರು.
10 ಸಾವಿರಕ್ಕೂ ಮಿಕ್ಕಿ ಭಕ್ತರಿಗೆ ಅನ್ನಪ್ರಸಾದ 22 ಗ್ರಾಮಗಳಿಗ
ಶ್ರೀ ದೇವರು ಬ್ರಹ್ಮರಥಕ್ಕೆ ಏರಿದ ಸಂದರ್ಭದಲ್ಲಿ ಪೆರುವಾಜೆ ಬೆಡಿ ಪ್ರದರ್ಶನ ನಡೆಯಿತು. ಚಿತ್ರಾಕರ್ಷಕ ದೃಶ್ಯಗಳೊಂದಿಗೆ ಬೆಡಿ ಪ್ರದರ್ಶನ ಭಕ್ತರ ಗಮನ ಸೆಳೆಯಿತು. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ ಭದ್ರತೆಯ ಜವಾಬ್ದಾರಿ ನಿರ್ವಹಿಸಿತ್ತು.
ಬ್ರಹ್ಮರಥೋತ್ಸವ ಆರಂಭಗೊಳ್ಳುವ ಮೊದಲು ರಥಬೀದಿಯಲ್ಲಿ ಭಜಕರಿಂದ ಕುಣಿತ ಭಜನೆ ನಡೆಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ, ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅದ್ಯಕ್ಷರು, ಸದಸ್ಯರು ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಪೆರುವಾಜೆ : ವೈಭವದಿಂದ ನಡೆದ ಶ್ರೀ ಜಲದುರ್ಗಾದೇವಿಯ ಬ್ರಹ್ಮರಥೋತ್ಸವ,ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗಿ
