ಸುಳ್ಯ : ದೊಡ್ಡ ಮನೆ, ಹೈ-ಫೈ ಜೀವನ ಇರಬಹುದು ಆದರೆ ಅಂತಹ ಜೀವನ ಸಂಸ್ಕೃತಿಯಲ್ಲಿ ನೆಮ್ಮದಿ, ಪ್ರೀತಿ ಇರುವುದಿಲ್ಲ. ನೆಮ್ಮದಿ, ಸಂಸ್ಕೃತಿಯ ಜೀವನ ಇರುವುದು ಧರ್ಮ, ಸಂಸ್ಕಾರ ಕಾಪಾಡಿಕೊಂಡಿರುವ ಕುಟುಂಬದಲ್ಲಿ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಸುಳ್ಯ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ನಿವೃತ್ತ ಅಧ್ಯಾಪಕ ರಾಮಕೃಷ್ಣ ಚೂಂತಾರು ಅವರು ಅಭಿನಂದನಾ ಭಾಷಣ ಮಾಡಿ, ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂತಹ ವೇದ ಶಿಬಿರ ನಡೆಯುತ್ತಿರುವುದು ಭಾರತ ದೇಶ ಇನ್ನೂ ಜೀವಂತವಾಗಿದೆ ಎಂಬುದರ ಪ್ರತೀಕ, ಕೇಶವಕೃಪಾದ ಮೂಲಕ ನಾವು ಇದನ್ನು ಕಾಣುತ್ತಿದ್ದೇವೆ. ನಿಜವಾದ ದೇಶದ ಅಭಿವೃದ್ಧಿ ಎಂದರೆ, ಪರಂಪರಾಗತ ಸಂಗತಿಯನ್ನು ಎಳವೆಯಲ್ಲಿ ಮಕ್ಕಳಿಗೆ ಕಲಿಸಬೇಕು ಎಂದ ಅವರು ನೈತಿಕ ಗಟ್ಟಿತನ, ಆಧ್ಯಾತ್ಮವೇ ನಿಜವಾದ ಯಶಸ್ಸು ಎಂದರು.
ಅಖಿಕ ಭಾರತ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಅಧ್ಯಕ್ಷತೆ ವಹಿಸಿದ್ದರು. ಶಿವಕೃಪಾ ಕಲಾ ಮಂದಿರದ ಮಾಲಕ ಹರೀಶ್ ಕುಮಾರ್ ಕೆ., ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ಭಟ್ ವಗೆನಾಡು ಮತ್ತಿತರರು ಉಪಸ್ಥಿತರಿದ್ದರು. ಅಭಿರಾಮ್ ಭಟ್ ಸ್ವಾಗತಿಸಿದರು. ಉದಯಭಾಸ್ಕರ್ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ;
ಸಮಾರಂಭದಲ್ಲಿ ಅರಂಬೂರು ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ವೇದ ಅಧ್ಯಾಪಕ ಬ್ರ.ವೇ.ಮೂ.ವೆಂಕಟೇಶ ಶಾಸ್ತ್ರಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್, ಸಂಗೀತ ಶಿಕ್ಷಕ ವಿದ್ವಾನ್ ಕಂಚನ ಈಶ್ವರ ಭಟ್ ಅವರಿಗೆ ಶ್ರೀ ಕೇಶವ ಸ್ಮೃತಿ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಳ್ಯ: ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಸಮರೋಪ,ಸಂಸ್ಕಾರದಿಂದ ನೆಮ್ಮದಿ: ಸುಬ್ರಹ್ಮಣ್ಯ ಶ್ರೀ
