ಕೆಲವೊಂದು ಘಟನೆಗಳು ಅದೆಷ್ಟೇ ದೂರದೂರಿನಲ್ಲಿ ನಡೆದಿದ್ದರೂ ಮನಸ್ಸಿಗೆ ಘಾಸಿಯುಂಟು ಮಾಡುತ್ತದೆ. ಎಳೆ ವಯಸ್ಸಿನಲ್ಲಿ ಹೃದಯಾಘಾತ, ಎಳೆ ವಯಸ್ಸಿಗೇ ಬರುವ ಸಾವುಗಳು..ಇವುಗಳೊಂದಿಗೆ ಬದುಕಿದ್ದಕ್ಕೂ ಕೊಲ್ಲುತ್ತಲೇ ಬದುಕಿಸುವ ಕೆಲವೊಂದು ಕಹಿ ಘಟನೆಗಳು.
ನಾಲ್ಕೈದು ದಿನಗಳ ಹಿಂದೆ ಹಾಸನದಲ್ಲಿ ಮದುವೆ ಮಂಟಪದಲ್ಲಿ ವರ ತಾಳಿ ಕಟ್ಟುವ ವೇಳೆಗೆ ಮದುವೆ ಬೇಡವೆಂದ ವಧುವಿನ ಬಗೆಗಿನ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವಧುವಿಗೆ ಬೇರೆ ಹುಡುಗನೊಂದಿಗೆ ಇದ್ದ ಪ್ರೀತಿ ಇದಕ್ಕೆ ಕಾರಣವಾಗಿತ್ತು. ಆದರೆ, ಇದನ್ನು ಯಾರೊಂದಿಗೂ ಹೇಳಿಕೊಳ್ಳದೆ ಬಚ್ಚಿಟ್ಟುಕೊಂಡು ಮದುವೆಯವರೆಗೆ ತಂದು ನಿಲ್ಲಿಸಿದ್ದ ವಧು ಸರಿಯಾಗಿ ತಾಳಿ ಕಟ್ಟುವ ವೇಳೆಗೆ ಮದುವೆಯಿಂದ ಹಿಂದೆ ಜಾರಿದ್ದು ವಿಷಾದನೀಯ. ಹೆಣ್ಣು ನೋಡುವ ಶಾಸ್ತ್ರದಿಂದ ಹಿಡಿದು ನಿಶ್ಚಿತಾರ್ಥ, ಮೆಹಂದಿ ಶಾಸ್ತ್ರದವರೆಗೆ ಆಕೆಗೆ ಸಾಕಷ್ಟು ಸಮಯಾವಕಾಶವಿತ್ತು. ಹೆತ್ತವರೊಂದಿಗೆ ಅಲ್ಲದಿದ್ದರೂ, ಮನೆಗೆ ಸಂಬಂಧಿಸಿದ ಅಥವಾ ಸ್ನೇಹಿತ ವರ್ಗದ ಬಳಿ ಹೇಳಿಯಾದರೂ ಮನೆಯಲ್ಲಿ ಮಾತುಕತೆ ನಡೆಸಬಹುದಿತ್ತು. ಹೀಗಾಗಿದ್ದರೆ ಬಹುಶಃ ಆ ಮನೆಯವರಿಗೆ ಒಂದಷ್ಟು ನೋವು ಆಗಿರುತ್ತಿತ್ತೇ ವಿನಃ ಬದುಕಿನ ಅಂತ್ಯಕಾಲದವರೆಗೂ ಕಾಡುವ ಕಹಿ ಘಟನೆಯಾಗಿ ಉಳಿಯುತ್ತಿರಲಿಲ್ಲ. ಜೊತೆಗೆ ವರ ಮತ್ತು ಆತನ ಮನೆಯವರಿಗೂ ಇದೊಂದು ಮಾನಸಿಕ ಹಿಂಸೆಯಾಗಿ ಬದಲಾಗುತ್ತಿರಲಿಲ್ಲ.
ವೈರಲ್ ವೀಡಿಯೋವನ್ನು ನೋಡುವಾಗ ಪ್ರತಿಯೊಬ್ಬರಿಗೂ ಅಯ್ಯೋ ಅನಿಸಿದ್ದು ಸುಳ್ಳಲ್ಲ. ತಾಳಿ ಕಟ್ಟುವ ವೇಳೆಗೆ ವಧು ತಾಳಿ ಕಟ್ಟದಂತೆ ಹಿಂದೆ ಸರಿದಿದ್ದು, ಈ ವೇಳೆಗೆ ಅಲ್ಲಿದ್ದ ಒಂದಷ್ಟು ಮಂದಿ ಆಕೆಯ ಮನವೊಲಿಸುವ ಪ್ರಯತ್ನ ಮಾಡಿದ್ದು, ಅವರ ಮುಖದಲ್ಲಿದ್ದ ಆತಂಕ, ಹೊಸ ಬದುಕಿಗೆ ಕಾಲಿಡುವುದರ ಜೊತೆಗೆ ಹೊಸ ಹೊಸ ಕನಸಿನೊಂದಿಗೆ ಕರಿಮಣಿ ಸರವನ್ನು ಆಕೆಯ ಎದುರು ಹಿಡಿದು ನಿಂತಿದ್ದ ವರ, ವಧು ಮದುವೆ ತಿರಸ್ಕರಿಸಿದಾಗ ಆತನ ಕಣ್ಣಲ್ಲಿ ಒತ್ತರಿಸಿದ ಕಣ್ಣೀರನ್ನು ಆತ ಒರೆಸಿಕೊಳ್ಳುತ್ತಿದ್ದ ರೀತಿ…ಎಂತವರಿಗೂ ಇದನ್ನು ನೋಡಿದಾಗ ಒಂದು ಕ್ಷಣ ಕಣ್ಣೀರು ತರಿಸಿದ್ದು ಸುಳ್ಳಲ್ಲ. ಅಷ್ಟಕ್ಕೂ ಆ ಕುಟುಂಬ ನಮಗ್ಯಾರಿಗೂ ಯಾರೂ ಅಲ್ಲ. ಎಲ್ಲೋ ನಡೆದ ಘಟನೆಯೊಂದು ಇನ್ಯಾರಿಗೋ ಕಣ್ಣೀರು ತರಿಸುತ್ತದೆ ಎಂದಾದರೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ವರ, ವರನ ಮನೆಯವರು, ವಧುವಿನ ಮನೆಯವರ ಪರಿಸ್ಥಿತಿ ಇನ್ನು ಹೇಗಿರಬೇಡ?
ಒಂದು ಮದುವೆ ಮಾಡುವುದೆಂದರೆ ಸುಲಭದ ಮಾತಲ್ಲ. ಅದೂ ಈಗಿನ ಪರಿಸ್ಥಿತಿಯಲ್ಲಿ. ಎಷ್ಟೇ ಸ್ಥಿತಿವಂತನಾದರೂ ಲಕ್ಷಾಂತರ ರೂಪಾಯಿ ವಿನಿಯೋಗಿಸಲೇಬೇಕು. ಬಂಗಾರದ ಬೆಲೆ ಗಗನಕ್ಕೇರಿರುವಾಗ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮದುವೆ ಮಾಡಿಸುವುದು ಸವಾಲೇ ಸರಿ. ಹೀಗಿರುವಾಗ ಲಕ್ಷಾಂತರ ರೂಪಾಯಿ ಸಾಲ ಮಾಡಿಯೋ ಅಥವಾ ಜೀವನಪೂರ್ತಿ ದುಡಿದ ಹಣವನ್ನು ಕೂಡಿಟ್ಟೋ ಮಗಳಿಗೆ ಮದುವೆ ಮಾಡಿಸುವ ಹೆತ್ತ ತಂದೆ ತಾಯಿಯರ ಪರಿಸ್ಥಿತಿ ಆ ಹುಡುಗಿಗೆ ಕಣ್ಣ ಮುಂದೆ ಬರಲೇ ಇಲ್ಲವೇ? ಮದುವೆ ಮಂಟಪದವರೆಗೂ ಬಂದು ಮದುವೆಯೊಂದು ನಿಂತಿದೆ ಎಂದರೆ ಆ ಹಾಲ್ ಬಾಡಿಗೆ, ಮಂಟಪದ ಅಲಂಕಾರದ ಖರ್ಚು, ಊಟ..ಹೀಗೆ ಇನ್ನೆಷ್ಟು ಖರ್ಚು ತಗುಲಿರಬಹುದು? ಬಹುಶಃ ಆ ಹುಡುಗಿ ಮದುವೆ ಮುರಿಯುವ ಮುನ್ನ ಇದನ್ನೆಲ್ಲ ಒಂದು ಕ್ಷಣವೂ ಯೋಚಿಸಲಿಲ್ಲವೇ? ಅಥವಾ ಯಾರನ್ನೋ ಪ್ರೀತಿಸಿ ಇನ್ಯಾರನ್ನೋ ಮದುವೆಯಾಗಲು ಹೊರಟ ಅವಳಿಗೆ ಇಂತ ಸೂಕ್ಷ್ಮ ವಿಚಾರಗಳು ʼಕೇವಲʼ ಎನಿಸಿಬಿಟ್ಟಿತೇ?
ಮಾಡಿದ ಖರ್ಚನ್ನು ಮತ್ತೆ ತರಲಾಗದಿದ್ದರೂ ಸಂಪಾದನೆಯನ್ನು ಮತ್ತೆ ಮಾಡಬಹುದು. ಆದರೆ ಮಗಳ ಮದುವೆ, ಆಕೆಯ ಭವಿಷ್ಯಕ್ಕಾಗಿ ಕನಸು ಕಂಡ ಆಕೆಯ ಹೆತ್ತವರ ಕನಸು ಛಿದ್ರಗೊಂಡಿದೆ. ಆಕೆಯೊಂದಿಗೆ ಬಾಳ್ವೆ ನಡೆಸುವ ಕನಸು ಹೊತ್ತ ವರನ ಕನಸು ನುಚ್ಚು ನೂರಾಗಿದೆ. ಮನೆಯನ್ನು ಬೆಳಗಲು ಸೊಸೆ ಬರುತ್ತಾಳೆ ಎಂದು ಕಾದು ಕುಳಿತ ಹಿರಿಯ ಜೀವಗಳ ಕನಸುಗಳು ಬತ್ತಿ ಹೋಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಆಡಿಕೊಂಡು ತಿರುಗುವ ತಿರುಬೋಕಿಗಳ ಬಾಯಿಗೆ ಹೊಸ ವಿಷಯ ಸಿಕ್ಕಂತಾಗಿದೆ. ಆಕೆಯ ಹೆತ್ತವರು, ವರ, ವರನ ಹೆತ್ತವರು ತಲೆ ಎತ್ತಿ ನಡೆಯದಂತೆ ಮಾಡಿಬಿಟ್ಟಿದೆ ಈ ಘಟನೆ. ತಪ್ಪೇ ಮಾಡದವರು ಜೀವನಪೂರ್ತಿ ಅನುಭವಿಸಬೇಕಾದ ಪರಿಸ್ಥಿತಿ.
ಅದೆಷ್ಟೋ ಬಾರಿ ಅನಿಸೋದು..ಈ ಮನುಷ್ಯ ಎಂಬ ಜೀವಿ ಯಾಕಿಷ್ಟು ಕಲ್ಲು ಹೃದಯದವನಾಗುತ್ತಿದ್ದಾನೆ? ತನ್ನ ಸ್ವಾರ್ಥಕ್ಕಾಗಿ ತನ್ನವರನ್ನೇ ಬಲಿಪಶುಗಳನ್ನಾಗಿಸುವ ದಾಷ್ಟ್ಯತನ ಬದಲಾಗುವುದೆಂತು? ಜನ್ಮ ನೀಡಿದ್ದಂದಿನಿಂದ ಮದುವೆಯ ತನಕ ಪ್ರೀತಿಸಿದ ಹೆತ್ತ ತಂದೆ ತಾಯಿಗಳ ಶ್ರಮ, ಮಕ್ಕಳ ಜೀವನಕ್ಕಾಗಿ ಅವರು ಪಡುವ ಕಷ್ಟಗಳು ಮಕ್ಕಳು ಬೆಳೆದು ದೊಡ್ಡವರಾದಾಗ ಅರಿವಿಗೆ ಬಾರದೇ ಹೋಗುತ್ತದೆಯಲ್ಲವೇ?
ವಯಸ್ಸು ಮತ್ತು ವಾಸ್ತವದ ಬಗ್ಗೆ ಅರಿಯುವಲ್ಲಿ ಈಗಿನ ಯುವ ಸಮುದಾಯ ಸೋಲುತ್ತಿದೆ. ವಯಸ್ಸು ವಾಸ್ತವವನ್ನು ಮರೆಸುತ್ತದೆ. ಆದರೆ ವಾಸ್ತವ ಏನೆಂದು ಅರಿವಾದಾಗ ವಯಸ್ಸು ದಾಟಿರುತ್ತದೆ. ಆಗಲೇ ತಪ್ಪಿನ ಅರಿವಾಗುವುದು. ವಯಸ್ಸು ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರಷ್ಟೇ ಬದುಕು ಸಾರ್ಥಕವಾಗುತ್ತದೆ ಎಂಬ ಸತ್ಯ ಪ್ರತೀ ಮಕ್ಕಳಿಗೂ ಅರಿವಾಗಬೇಕಿದೆ. ಹೆತ್ತವರು ಅದೆಷ್ಟೇ ಕಷ್ಟವಾದರೂ ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ, ಮಕ್ಕಳನ್ನು ಬಿಟ್ಟು ಹೋಗುವುದಿಲ್ಲ. ಆದರೆ ಪ್ರೀತಿ ಪ್ರೇಮ ಎಂದು ಹೆತ್ತವರನ್ನು ಬಿಟ್ಟು ಹೋದರೆ ನಾಳೆ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಜೊತೆಗೆ ನಿಲ್ಲುವುದಕ್ಕೆ ಯಾರೂ ಇರುವುದಿಲ್ಲ. ಇದೇ ವಾಸ್ತವ.
✍️ಧನ್ಯಾ ಬಾಳೆಕಜೆ
ಮದುವೆಗಳು ಮ(ಕ)ನಸುಗಳನ್ನು ಮುರಿಯದಿರಲಿ..
