ಮಕ್ಕಳಲ್ಲಿ ಕಥೆ ಬರೆಯುವ ಹವ್ಯಾಸವನ್ನು ಬೆಳೆಸಿದರೆ ಮುಂದೆ ಉತ್ತಮ ಕಥೆಗಾರರಾಗಿ ಭಾಷೆಯ ದೊಡ್ಡ ಆಸ್ತಿ ಆಗಲಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಾಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕನ್ನಡ ಭವನದಲ್ಲಿ ಅರೆಭಾಷೆ ಕತೆ ಬರೆಮೊ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕತೆ ಎಂಬುದು ಎಲ್ಲರ ಜೀವನದಲ್ಲೂ ಇರುತ್ತದೆ ಅದನ್ನು ವ್ಯವಸ್ಥಿತವಾಗಿ ಅಕ್ಷರ ರೂಪಕ್ಕೆ ಇಳಿಸಲು ಪ್ರೇರೇಪಿಸುವುದಕ್ಕಾಗಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಕಾಡೆಮಿ ಕಡೆಯಿಂದ ಸಾಹಿತಿಗಳಿಗೆ ಉತ್ತಮ ಪ್ರೋತ್ಸಾಹವಿದ್ದು ಎಲ್ಲರೂ ಅದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಅಕಾಡೆಮಿಯ ಸದಸ್ಯ ಹಾಗು ಕಾರ್ಯಕ್ರಮದ ಸಂಚಾಲಕ ಲೋಕೇಶ್ ಊರುಬೈಲು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಖ್ಯಾತ ಸಾಹಿತಿ, ಅಕಾಡೆಮಿ ಸದ್ಯಸರಾದ ತೇಜಕುಮಾರ್ ಕುಡೇಕಲ್ಲು ಮತ್ತು ಅರಂತೋಡು ಶಾಲೆಯ ಶಿಕ್ಷಕರಾದ ಕಿಶೋರ್ ಕುಮಾರ್ ಕಿರ್ಲಾಯ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು ಮತ್ತು ಪ್ರಸನ್ನ ಐವರ್ನಾಡು, ಮತ್ತು ಅಕಾಡೆಮಿ ಸದಸ್ಯರಾದ ಗೋಪಾಲ ಪೆರಾಜೆ ಉಪಸ್ಥಿತರಿದ್ದರು.
ಕು. ಅಕ್ಷಿತಾ ನೀರ್ಪಾಡಿ ಪ್ರಾರ್ಥಿಸಿ, ದೃತಿ ದೀಟಿಗೆ ಸ್ವಾಗತಿಸಿದರು. ಖಷೀರ ಸಿ.ಯು ವಂದಿಸಿದರು. ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ
ಅಕಾಡೆಮಿ ಸದಸ್ಯರಾದ ಗೋಪಾಲ್ ಪೆರಾಜೆ,ಜ್ಞಾನೇಶ್ ನಿಡ್ಯಮಲೆ ,ಚಂದ್ರಶೇಖರ ಪೇರಾಲ್,ಸುದ್ದಿ ಬಿಡುಗಡೆ ಸಂಪಾದಕರಾದ ಹರೀಶ್ ಬಂಟ್ವಾಳ್ ಹಾಗು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಾಗಾರದಲ್ಲಿ ಸುಮಾರು ಇಪ್ಪತ್ತಮೂರು ಮಕ್ಕಳ ಕಥೆಗಳು ತಯಾರಾಗಿದ್ದು ಮಕ್ಕಳು ಅರೆ ಭಾಷೆಯಲ್ಲಿ ಮೊದಲಬಾರಿಗೆ ಕಥೆ ಬರೆದು ಸೈ ಎನಿಸಿದರು.
ಅರೆಬಾಷೆ ಅಕಾಡೆಮಿಯು ಮೊದಲ ಬಾರಿಗೆ ಮುಂದಿನ ಪೀಳಿಗೆಗೆ ಸಾಹಿತ್ಯವನ್ನು ಒದಗಿಸುವ ದೃಷ್ಟಿಯಿಂದ ಮಕ್ಕಳಿಗಾಗಿ ಕಥಾ ಕಾರ್ಯಾಗಾರವನ್ನು ಆಯೋಜಿಸಿದೆ.
ಕಾರ್ಯಾಗಾರದಲ್ಲಿ ತಯಾರಾದ ಮಕ್ಕಳ ಕಥೆಗಳು ನಿಜಕ್ಕೂ ಒಂದಕ್ಕಿಂತ ಒಂದು ಉತ್ತಮವಾಗಿದೆ. ಈ ಕಥೆಗಳನ್ನು ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಅಕಾಡೆಮಿಯ ಹಿಂಗಾರ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
ಲೋಕೇಶ್ ಊರುಬೈಲ್ ಸದಸ್ಯ ಸಂಚಾಲಕರು.