ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹಿಂದೂ ಕಾರ್ಯಕರ್ತರ ಮನೆಗಳಿಗೆ ರಾತ್ರಿ ವೇಳೆ ಪೋಲೀಸರು ಭೇಟಿ ನೀಡಿರುವುದನ್ನು ಆಕ್ಷೇಪಿಸಿರುವ ಸಂಘಟನೆಯವರು, ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಕಳೆದ ಅನೇಕ ವರ್ಷಗಳಿಂದ ವಿವಿಧ ಹಿಂದೂ ಸಂಘಟನೆಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು ಸಮಾಜದಲ್ಲಿ ಸಂಸ್ಕಾರ ಮತ್ತು ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿವೆ. ಹಿಂದೂ ಸಂಘಟನೆಗಳ ಕಾರಣದಿಂದಾಗಿಯೇ ಸುಳ್ಯವು ಸಾಮಾಜಿಕವಾಗಿ ಇತರೆ ಕಡೆಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿರುತ್ತದೆ. ಹಿಂದೂ ಸಂಘಟನೆಗಳ ಸಂಸ್ಕಾರದ ಕಾರ್ಯದಿಂದಾಗಿ ಸಮಾಜದಲ್ಲಿ ಅಪರಾಧ ಪ್ರಕರಣಗಳು ಬಹಳಷ್ಟು ಕಡಿಮೆಯಾಗಿದ್ದು ಸುಳ್ಯದ ಪೋಲೀಸ್ ಇಲಾಖೆ ಹಾಗೂ ನ್ಯಾಯಾಲಯದಲ್ಲಿರುವ ಅತೀ ಕಡಿಮೆ ಪ್ರಕರಣಗಳೇ ಇದಕ್ಕೆ ಸಾಕ್ಷಿಯಾಗಿದೆ.
ಇದೀಗ ಪೋಲೀಸ್ ಇಲಾಖೆಯ ಕಡೆಯಿಂದ ಏಕಾಏಕಿ ಈ ರೀತಿ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿರುವ ಕಾರ್ಯಕರ್ತರನ್ನು ಪಟ್ಟಿ ಮಾಡಿ ಅವರುಗಳ ಮನೆಗೆ ಅಪರಾತ್ರಿ ಭೇಟಿ ನೀಡಿ ಅವರ ಫೋಟೋ ತೆಗೆಯುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಇದು ತೀರಾ ಆಘಾತಕಾರಿಯಾಗಿದೆ. ಮನೆಗಳಿಗೆ ರಾತ್ರೆ ವೇಳೆ ಭೇಟಿ ನೀಡುವುದರಿಂದ ಮನೆಯಲ್ಲಿ ಭೀತಿಯ ವಾತಾವರಣ ಮೂಡುತ್ತಿದ್ದು, ಮನೆಯಲ್ಲಿರುವ ವೃದ್ಧರಿಗೆ ಮತ್ತು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಅಲ್ಲದೆ ಪದೇ ಪದೇ ಪೋಲೀಸ್ ಇಲಾಖೆಯಿಂದ ಮನೆಗಳಿಗೆ ಭೇಟಿ ನೀಡುವುದರಿಂದ ಊರಿನಲ್ಲಿ ಸಾಮಾಜಿಕ ಕಾರ್ಯ ಮಾಡುವ ವ್ಯಕ್ತಿಗಳಿಗೆ ಅವಮಾನದ ಸ್ಥಿತಿ ಉಂಟಾಗಿರುತ್ತದೆ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಈ ಪ್ರಕ್ರಿಯೆ ನಡೆಸುತ್ತಿರುವುದಾಗಿ ಪೋಲೀಸ್ ಸಿಬ್ಬಂದಿಗಳು ಹೇಳಿದ್ದು, ಈ ರೀತಿ ಮಾನಸಿಕ ದೌರ್ಜನ್ಯವನ್ನು ನಡೆಸುವ ಮೂಲಕ ಅವರ ಮಾನಸಿಕ ಧೈರ್ಯವನ್ನು ಕುಗ್ಗಿಸುವ ಕಾರ್ಯವು ಪೋಲೀಸ್ ಇಲಾಖೆಯಿಂದ ನಡೆಯುತ್ತಿರುವುದು ತೀರಾ ಅಕ್ಷಮ್ಯವಾಗಿದೆ. ಈ ಪ್ರಕ್ರಿಯೆಯು ಮುಂದುವರಿದಲ್ಲಿ ಈ ಕುರಿತು ಸೂಕ್ತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ. ಆದುದರಿಂದ ಈ ಪ್ರಕ್ರಿಯೆಯನ್ನೂ ತಕ್ಷಣದಿಂದ ನಿಲ್ಲಿಸುವಂತೆ ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹರೀಶ್ ಕಂಜಿಪಿಲಿ, ಸೋಮಶೇಖರ್ ಪೈಕ, ವಿನಯ ಮುಳುಗಾಡು, ವಿನಯ ಕುಮಾರ್ ಕಂದಡ್ಕ, ಸಂತೋಷ್ ಜಾಕೆ, ಸುಬೋಥ್ ಶೆಟ್ಟಿ, ಸೋಮನಾಥ ಪೂಜಾರಿ ಹಾಗೂ ಹಿಂದೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಘಟನೆಯಲ್ಲಿ ತೊಡಗಿಸಿಕೊಂಡ ಹಿಂದೂ ಕಾರ್ಯಕರ್ತರ ಮನೆಗಳಿಗೆ ರಾತ್ರಿ ವೇಳೆ ಪೊಲೀಸರ ಭೇಟಿಗೆ ಆಕ್ಷೇಪ
