ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ 2ನೇ ವರ್ಷದ ವಾರ್ಷಿಕ ಸಭೆಯು ಜೂ. 08ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಜನಾರ್ದನ ದೋಳ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘವು 2023ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2024-25ನೇ ಸಾಲು ಸಹಕಾರಿಗೆ ಆರ್ಥಿಕವಾಗಿ ವ್ಯವಹಾರ ಮಾಡಲು ಪೂರ್ಣವಾಗಿ ದೊರಕಿದ ಪ್ರಥಮ ವರ್ಷವಾಗಿದ್ದು ಈ ಅವಧಿಯಲ್ಲಿ ಸಂಘವು ಸದಸ್ಯರ ಸಹಕಾರದೊಂದಿಗೆ ಒಟ್ಟು ರೂ. 19,22,00,192.00 ಕೋಟಿ ವ್ಯವಹಾರ ನಡೆಸಿ ರೂ. 1,28,085.00 ಲಕ್ಷ ನಿವ್ವಳ ಲಾಭ ಪಡೆದಿರುತ್ತೇವೆ. ನಮ್ಮ ಈ ಸಣ್ಣ
ಸಂಸ್ಥೆಯು 2ನೇ ವರ್ಷದಲ್ಲೇ ಇಷ್ಟು ನಿವ್ವಳ ಲಾಭವನ್ನು ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯೇ ಸರಿ. ಸಂಘದಲ್ಲಿ ‘ಅ’ ತರಗತಿ ಮತ್ತು ‘ಸಿ’ ತರಗತಿ ಸೇರಿ ಒಟ್ಟು 835 ಜನ ಸದಸ್ಯರಿದ್ದು ರೂ. 8,35,500.00 ಪಾಲು ಬಂಡವಾಳವಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 70 ರಷ್ಟು ಹೆಚ್ಚಳವಾಗಿದೆ. ಸಂಘವು ರೂ. 2,12,48,676.00 ಕೋಟಿ ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಿದ್ದು ಕಳೆದ ಸಾಲಿಗಿಂತ ಶೇ. 52 ರಷ್ಟು ಪ್ರಗತಿ ಸಾದಿಸಲಾಗಿದೆ. ಹೊರ ಬಾಕಿ ಸಾಲವು ರೂ. 2,03,13,157.00 ಕೋಟಿ ಇದ್ದು ಸಾಲ ವಿತರಣೆಯಲ್ಲಿ ಕಳೆದ ಸಾಲಿಗಿಂತ ಶೇ. 40 ರಷ್ಟು ಹೆಚ್ಚಳವಾಗಿರುತ್ತದೆ ಅಲ್ಲದೇ ಸಾಲ ಮರುಪಾವತಿಯಲ್ಲಿ ಕೂಡ ಶೇ. 99.20 ರಷ್ಟು ಉತ್ತಮ ಪ್ರಗತಿ ದಾಖಲಿಸಿರುತ್ತೇವೆ ಸಂಘವು ವರ್ಷಾಂತ್ಯಕ್ಕೆ ರೂ. 2,22,75,561.00 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ಸಭೆಯನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸಹಕಾರಿಯ ಅಧ್ಯಕ್ಷರಾದ ಜನಾರ್ದನ ದೋಳ ಹೇಳಿದರು.
2024-25ನೇ ಸಾಲಿನ ಲೆಕ್ಕಪತ್ರಗಳನ್ನು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, 2025-26ನೇ ಸಾಲಿಗೆ ತಯಾರಿಸಿದ ಮುಂಗಡಪತ್ರವನ್ನು ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ ಸಭೆಗೆ ಮಂಡಿಸಿದರು. ನಿರ್ದೇಶಕರಾದ ಶ್ರೀಮತಿ ಹರ್ಷಿತಾ ಕುದ್ಪಾಜೆ ಮಹಾಸಭೆಯ ನೋಟಿಸನ್ನು ಓದಿ ದಾಖಲಿಸಿದರು. ನಿರ್ದೇಶಕರಾದ ಪ್ರಕಾಶ್ ಕೇರ್ಪಳ 2025-26ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಪ್ರಭಾಕರನ್ ನಾಯರ್ ಸಹಕಾರಿಯ ಉಪನಿಂಧನೆಗಳಲ್ಲಿ ತಿದ್ದುಪಡಿಯ ಕುರಿತು ಮತ್ತು ವೃತ್ತಿಪರ ನಿರ್ದೇಶಕರಾದ ಧರ್ಮಪಾಲ ಕೊಯಿಂಗಾಜೆ ಯವರು ಸಹಕಾರಿಯ ಸದಸ್ಯರ ಸಾಲದ ನಿಯಮಗಳು ಮತ್ತು ಠೇವಣಾತಿ ನಿಯಮಗಳ ಬಗ್ಗೆ ಸಭೆಗೆ ಪ್ರಸ್ತಾವನೆ ಮಂಡಿಸಿದರು.
ಸಹಕಾರಿಯ ಲೆಕ್ಕಪರಿಶೋಧಕರಾದ ಸಿ ಎ ರವೀಂದ್ರನಾಥ ಕೇವಳರವರು ಸಂಘದ ಬೆಳವಣಿಗೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಸದಸ್ಯರಾದ ತೀರ್ಥರಾಮ ಹೊದ್ದೆಟ್ಟಿ, ಚಂದ್ರಹಾಸ ಪೈಚಾರ್, ಚಕ್ರಪಾಣಿ ವಾಗ್ಲೆ, ಆಶೋಕ್ ಪೀಚೆ, ಕೇಶವ ನಾಯಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಭಾಗವಹಿಸಿದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಆಗಮಿಸಿದ 5 ಮಂದಿ ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು.
ಸಂಘದ ವೃತ್ತಿಪರ ನಿರ್ದೇಶಕ ಆನಂದ ಖಂಡಿಗ, ನಿರ್ದೇಶಕರುಗಳಾದ ಸತೀಶ್ ಕೆ.ಜಿ, ದೀಕ್ಷಿತ್ ಪಾನತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೃತ್ತಿಪರ ನಿರ್ದೇಶಕರಾದ ಡಾ. ಪುರುಷೋತ್ತಮ ಕಟ್ಟೆಮನೆ ಸ್ವಾಗತಿಸಿ, ನಿರ್ದೇಶಕರಾದ ಸಚಿನ್ ಕುಮಾರ್ ಬಳ್ಳಡ್ಕ ವಂದಿಸಿದರು. ನಿರ್ದೇಶಕರಾದ ಶ್ರೀಮತಿ ಭವಾನಿ ಬಿಳಿಮಲೆ ಮತ್ತು ಯಶೋದ ಪೇರಡ್ಕ ಪ್ರಾರ್ಥಿಸಿದರು.ನಿರ್ದೇಶಕ ಮಹೇಶ್ ಮೇರ್ಕಜೆ ಕಾರ್ಯಕ್ರಮ ನಿರೂಪಿಸಿದರು.