ತನ್ನ ಪತಿ ಡಾ.ಆದರ್ಶ ಮತ್ತು ಅವರ ಮನೆಯವರ ಮೇಲೆ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಅನೂಹ್ಯ ಎಂಬವರು ಮೈಸೂರಲ್ಲಿ ಪೋಲೀಸರಿಗೆ ನೀಡಿರುವ ಕೇಸಿಗೆ ರಾಜ್ಯ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿರುವುದಾಗಿ ತಿಳಿದುಬಂದಿದೆ.ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಮದುವೆಯೂ ಆಗಿ ಬಳಿಕ ಮನೆಗೆ ಕರೆದೊಯ್ಯಲು ಡಾ.ಆದರ್ಶ ನಿರಾಕರಿಸಿ ವರದಕ್ಷಿಣೆಗಾಗಿ ಶರತ್ತು ವಿಧಿಸಿರುವುದಾಗಿ ಅನೂಹ್ಯ ದೂರಿನಲ್ಲಿ ತಿಳಿಸಿದ್ದರು.
ಪಂಜ ಮೂಲದ ಡಾ.ಆದರ್ಶ, ಅವರ ತಂದೆ ಪಂಜದ ಸಂಗಾತಿ ವೆಂಕಟ್ರಮಣ ಭಟ್, ತಾಯಿ ಶಶಿಕಲಾ, ಅಣ್ಣ ಆದಿತ್ಯ ಬಂಧು ರಜಿತ್ ಭಟ್ ರವರ ವಿರುದ್ಧ ಡಾ.ಆದರ್ಶರ ಪತ್ನಿ ಮೈಸೂರಿನ ಅನೂಹ್ಯರವರು ಮೈಸೂರು ಪೋಲೀಸರಿಗೆ ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಾಗಿತ್ತು. ಇದರ ವಿರುದ್ಧ ತಡೆಯಾಜ್ಞೆ ತರಲು ಡಾ.ಆದರ್ಶ ಮತ್ತು ಮನೆಯವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ ಪ್ರಕರಣದ ತನಿಖೆ ನಡೆಸುತ್ತಿರುವ ಮೈಸೂರು ಪೋಲೀಸರು ಎರಡು ದಿನಗಳ ಹಿಂದೆ ಆರೋಪಿಗಳಲ್ಲೊಬ್ಬರಾದ ರಜಿತ್ ಭಟ್ ರನ್ನು ಸುಳ್ಯದ ಹಳೆಗೇಟಿನಿಂದ ಬಂಧಿಸಿದ್ದರು.
ಇದೀಗ ಹೈಕೋರ್ಟಿನಲ್ಲಿ ಡಾ.ಆದರ್ಶ, ವೆಂಕಟ್ರಮಣ ಭಟ್ ಮತ್ತು ಮನೆಯವರ ಮೇಲಿನ ಕೇಸಿನ ತನಿಖೆಗೆ ತಡೆಯಾಜ್ಞೆ ದೊರೆತ್ತಿದೆ ಎಂದು ತಿಳಿದು ಬಂದಿದೆ.ಅನೂಹ್ಯ ತನ್ನ ಪತಿ ಮತ್ತು ಅವರ ಮನೆಯವರ ಮೇಲೆ ಪೋಲೀಸ್ ದೂರು ಕೊಡುವುದಕ್ಕಿಂತ ಮೊದಲೇ ಡಾ.ಆದರ್ಶರು ಪತ್ನಿ ಅನೂಹ್ಯರಿಂದ ವಿಚ್ಛೇದನ ಕೋರಿ ಮೈಸೂರಲ್ಲಿ ದಾವೆ ಹೂಡಿದ್ದರೆಂದೂ, ಆ ಬಳಿಕ ಉದ್ದೇಶಪೂರ್ವಕವಾಗಿ ಈ ರೀತಿ ಕೇಸು ಹಾಕಿ ಅವಮಾನಗೊಳಿಸಲು ಪ್ರಯತ್ನಿಸಿರುವುದಾಗಿಯೂ ಡಾ.ಆದರ್ಶ ಪರ ವಕೀಲರು ದಾಖಲೆ ಸಹಿತ ವಾದ ಮಂಡಿಸಿದ್ದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಈ ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ.
ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ
