ಸುಳ್ಯ: ಆಗಸ್ಟ್ 29 ರಂದು ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ನೇ ದಿನದ ಆತ್ಮ ಯೋಜನೆಯಡಿ ಆಸಕ್ತ ರೈತರಿಗೆ ಮಲ್ಲಿಗೆ ಕೃಷಿಯ ಬಗ್ಗೆ ತರಬೇತಿಯು ನಡೆಯಿತು. ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ ಆರ್ ಎಲ್ ಎಂ ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾರವರು ಮಲ್ಲಿಗೆ ಕೃಷಿಯು ಮಹಿಳೆಯರಿಗೆ ಉತ್ತಮ ಆದಾಯ ತರಬಲ್ಲ ಉದ್ಯೋಗವಾಗಿದೆ. ಮನೆಯಲ್ಲೇ ಇರುವ ಮಹಿಳೆಯರು ಮಲ್ಲಿಗೆ ಕೃಷಿಯನ್ನು ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬಹುದು. ಉತ್ತಮವಾಗಿ ಮಲ್ಲಿಗೆ ಕೃಷಿಯ ನಿರ್ವಹಣೆಯನ್ನು ಆಸಕ್ತಿಯಿಂದ ಮಾಡಿದ್ದಲ್ಲಿ ಕುಟುಂಬದ ಕನಿಷ್ಠ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತದೆ. ಉಪ ಕಸುಬಾಗಿ ಇದನ್ನು ಅಳವಡಿಸಿಕೊಂಡು ಆದಾಯ ಗಳಿಸಿಕೊಳ್ಳಬಹುದು. ಈಗಾಗಲೇ ನಮ್ಮ ಆಸಕ್ತ ಸ್ವ ಸಹಾಯ ಸಂಘದ ಮಹಿಳೆಯರಿಗೆ ಮಲ್ಲಿಗೆ ಮಾರ್ಕೆಟಿಂಗ್ ಬಗ್ಗೆ ಕೂಡ ಮಾಹಿತಿಯನ್ನು ನೀಡಲಾಗಿದೆ. ಇವತ್ತಿನ ತರಬೇತಿಯು ನಮ್ಮ ರೈತರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಕೃಷಿ ಸಖಿ ಹಾಗೂ ಉತ್ತಮ ರೈತ ಮಹಿಳೆ ಮುರುಳ್ಯ ನೇತ್ರಾವತಿಯವರು ಮಲ್ಲಿಗೆ ಕೃಷಿಯ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ರೈತರು, ಕೃಷಿಸಖಿಯರು ಭಾಗವಹಿಸಿದರು. ಇಲಾಖಾ ಸಿಬ್ಬಂದಿಗಳು ಸಹಕರಿಸಿದರು. ಸ್ವಾಗತ ಹಾಗೂ ಧನ್ಯವಾದವನ್ನು ಬಿ ಟಿ ಎಂ ನಂದಿತಾರವರು ನಿರ್ವಹಿಸಿದರು.
ಸುಳ್ಯ : ರೈತರಿಗೆ ಮಲ್ಲಿಗೆ ಕೃಷಿ ತರಬೇತಿ

















