ಸುಳ್ಯ ತಾಲೂಕಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪೇರಡ್ಕ ಗೂನಡ್ಕ ದರ್ಗಾ ಶರೀಫಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದ ಈ ವರ್ಷದ ಸಮಾರೋಪ ಸಮಾರಂಭ ಇಂದು ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಳೆದೆರಡು ದಿನಗಳಲ್ಲಿ ಕೇರಳ ಕರ್ನಾಟಕದ ಸುಪ್ರಸಿದ್ಧ ವಾಗ್ಮಿಗಳ ಧಾರ್ಮಿಕ ಉಪನ್ಯಾಸ ನಡೆದಿದ್ದು, ಸಮಾರೋಪ ದಿನವಾದ ಇಂದು ಸಯ್ಯಿದ್ ದುಗಲಡ್ಕ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಅಹ್ಮದ್ ನಈಂ ಮಅಬರಿ ಫೈಝಿ ಧಾರ್ಮಿಕ ಉಪನ್ಯಾಸ ಮತ್ತು ಸೌಹಾರ್ದ ಸಮ್ಮೇಳನದಲ್ಲಿ ಸಂದೇಶ ಭಾಷಣವನ್ನು ನಡೆಸಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ನಡೆಯಲಿರುವ ಸರ್ವ ಧರ್ಮ ಸಮ್ಮೇಳನದಲ್ಲಿ ವಿವಿಧ ಧರ್ಮಗಳ ಗುರುಗಳು, ಕರ್ನಾಟಕ ಸರ್ಕಾರ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಎ ಗಫೂರ್ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ನಾಯಕರು, ಸಾಮಾಜಿಕ ನೇತಾರರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಬೃಹತ್ ಅನ್ನಸಂತರ್ಪಣೆ ನಡೆಯಲಿದೆ.



































