ಅಡ್ತಲೆ ಪ್ರದೇಶದಲ್ಲಿ ಕಾಡಾನೆಗಳಿಂದ ನಿರಂತರವಾಗಿ ಆಗುತ್ತಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ವತಿಯಿಂದ ನೊಂದ ಕೃಷಿಕರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆ ಇಂದು (ಫೆ. 8) ವೇದಿಕೆಯ ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಅಡ್ತಲೆ ವಠಾರದಲ್ಲಿ ನಡೆಯಿತು.
ಆನೆ ದಾಳಿಯಿಂದ ನೊಂದ ಹಲವಾರು ಕೃಷಿಕರು ತಮ್ಮ ಬೆಳೆ ನಾಶವಾದ ಕುರಿತು ಹಾಗೂ ಅರಂತೋಡು-ಅಡ್ತಲೆ ರಸ್ತೆಯಲ್ಲಿ ಸಂಚರಿಸುವಾಗ ಆನೆಗಳಿಂದಾದ ಭಯದ ವಾತಾವರಣವನ್ನು ಸಭೆಯಲ್ಲಿ ತಿಳಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಿವೃತ್ತ ಯೋಧರಾದ ಜಗದೀಶ್ ಕೆ.ಪಿ ಆನೆ ದಾಳಿಯನ್ನು ತಡೆಯಲು ಸಾರ್ವಜನಿಕರಿಂದ ಸಾಧ್ಯವಿರುವ ಕ್ರಮಗಳನ್ನು ಹಾಗೂ ಅರಣ್ಯ ಇಲಾಖೆಗಳಲ್ಲಿರುವ ಕ್ರಮಗಳು ಹಾಗೂ ಅನುದಾನದ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಇಲಾಖೆ ಹಾಗೂ ಸಾರ್ವಜನಿಕರು ಒಗ್ಗೂಡಿಕೊಂಡು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
- ಎಲಿಪೆಂಟ್ ಟಾಸ್ಕ್ ಫೋರ್ಸ್ (ETF) ಹಾಗೂ ಸೋಲಾರ್ ಫೆನ್ಸಿಂಗ್ ವ್ಯವಸ್ಥೆಯನ್ನು ಅತೀ ಶೀಘ್ರವಾಗಿ ಅನುಷ್ಠಾನ ಕೈಗೊಳ್ಳಲು ಇಲಾಖೆಯ ಮುಖಾಂತರ ಸರಕಾರಕ್ಕೆ ಮನವಿ ನೀಡಿ ಸರ್ಕಾರದ ಮಟ್ಟದಲ್ಲಿ ಒತ್ತಡ ತರಲು ಕ್ರಮ ವಹಿಸುವುದು.
- ಮಾನ್ಯ ಶಾಸಕರು ಹಾಗೂ ಎ.ಸಿ.ಎಫ್ ಅವರುಗಳನ್ನು ಅಡ್ತಲೆಗೆ ಬರಹೇಳಿ ಅಡ್ತಲೆಯಲ್ಲಿ ವೇದಿಕೆಯ ನೇತೃತ್ವದಲ್ಲಿ ಕೃಷಿಕರ ಹಾಗೂ ನಮ್ಮ ಭಾಗದ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಕೈಗೊಳ್ಳಬೇಕಾದ ಶಾಶ್ವತ ಕ್ರಮಗಳ ಕುರಿತು ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕರೆಯುವುದು.
- ಆನೆ ದಾಳಿಯನ್ನು ತಡೆಯಲು ಅರಣ್ಯ ಇಲಾಖೆಯಲ್ಲಿರುವ ಅನುದಾನದಲ್ಲಿ 10 ಪ್ರತಿಶತ ಕೃಷಿಕರ ಮೂಲಕ ಹಾಗೂ 90 ಪ್ರತಿಶತ ಇಲಾಖೆಯಿಂದ ಅನುದಾನ ಬಿಡುಗಡೆಗೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸುವುದು.
- ತಕ್ಷಣವಾಗಿ ದಿನ ನಿಗದಿ ಮಾಡಿ ಸದ್ರಿ ಅಡ್ತಲೆ ಪ್ರದೇಶದಲ್ಲಿರುವ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಜೊತೆಗೂಡಿ ದೂರದ ಕಾಡಿನ ಪ್ರದೇಶಕ್ಕೆ ಓಡಿಸುವುದು.
- ಅರಣ್ಯ ಹಾಗೂ ಕಾಡುಪ್ರಾಣಿಗಳ ಉಳಿವಿನ ಭವಿಷ್ಯದ ಹಿತದೃಷ್ಟಿಯಿಂದ ಸ್ಪಂದನ ಗೆಳೆಯರ ಬಳಗದ ಸಹಯೋಗದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸೀಡ್ ಬಾಲ್ ಅಭಿಯಾನವನ್ನು ಮುಂದಿನ ಮಳೆಗಾಲದಲ್ಲಿ ನಡೆಸುವುದು.
ಸಭೆಯಲ್ಲಿ ಸುಮಾರು 50 ಕ್ಕೂ ಮಿಕ್ಕಿ ಸಾರ್ವಜನಿಕರು ಭಾಗಿಯಾಗಿ ವಿಚಾರ ವಿನಿಮಯ ಮಾಡಿಕೊಂಡರು.



































