ಕಟೀಲು ::ಹುಟ್ಟು ಮತ್ತು ಸಾವಿನ ಸಂದರ್ಭದಲ್ಲಿ ಅನುಸರಿಸಲಾಗುವ 10 ದಿನಗಳ ಸೂತಕ (ಅಸೌಚ) ಅವಧಿಯನ್ನು ಮೂರು ದಿನಗಳಿಗೆ ಮಿತಿಗೊಳಿಸಲು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭ್ರಾಮರೀವನದಲ್ಲಿ ರವಿವಾರ ನಡೆದ ಅಶೌಚ ನಿರ್ಣಯ ಗೋಷ್ಠಿಯಲ್ಲಿ ನಿರ್ಣಯಕ್ಕೆ ಬರಲಾಗಿದೆ.
ದೇಶಾಂತರ ನಿರ್ಣಯ ಸಪಿಂಡಾದಿ ವಿಚಾರಗಳ ಬಗ್ಗೆ ಚರ್ಚಿಸಿ ಈ ಕಾಲಕ್ಕೆ ಅನುಗುಣವಾಗಿ ಶಾಸ್ತ್ರದ ಚೌಕಟ್ಟಿನಲ್ಲಿ ಅಶೌಚ ಮಿತಿಯನ್ನು ತರಲಾಯಿತು. ನಾಲ್ಕರಿಂದ ಏಳು ತಲೆಮಾರುವರೆಗಿನ ಹತ್ತು ದಿನಗಳವರೆಗಿನ ಆಶೌಚವನ್ನು ಸೃತಿ ನಿರ್ದೇಶನದಂತೆ ಮೂರು ದಿನಗಳಿಗೆ ಮಿತಿಗೊಳಿಸಿ ನಿರ್ಣಯಿಸಲಾಯಿತು. ಈ ಬಗ್ಗೆ ವಿಮರ್ಶೆ ನಡೆಸಲು 15 ದಿನ ಕಾಲಾವಕಾಶ ನೀಡಲಾಯಿತು.
ವಿದ್ವದ್ಯೋಷ್ಠಿ ಉದ್ಘಾಟಿಸಿದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಯಾವುದನ್ನು ಮಾಡಲಿಕ್ಕೆ ಆಗುವುದಿಲ್ಲವೋ ಶಾಸ್ತ್ರಗಳು ಅವುಗಳನ್ನು ಹೇಳುವುದಿಲ್ಲ. ಪುರೋಹಿತರು, ದೇವಾಲಯಗಳು ಅರ್ಚಕರು ಅಶೌಚ ನಿಮಯಗಳಿಂದ ಇವತ್ತಿನ ಕಾಲಮಾನದಲ್ಲಿ ಸಮಸ್ಯೆಗೊಳಗಾಗುತ್ತಿರುವುದು ಹೌದು. ಹಾಗಾಗಿ ವಿದ್ವಾಂಸರ ಚರ್ಚೆಗಳೊಂದಿಗೆ ಇದಕ್ಕೆ ಪರಿಹಾರಗಳೂ ಸಿಗಲಿ ಎಂದರು.
ಸಮಾರೋಪದಲ್ಲಿ ಮಾತನಾಡಿದ ಪಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ, ಸ್ಮೃತಿ ಗ್ರಂಥಗಳು ಅಶೌಚವನ್ನು ಸಂಕುಚಿತಗೊಳಿಸಿದರೂ ದೋಷ,
ವಿಸ್ತರಿಸಿದರೂ ದೋಷ ಎಂದು ಎಚ್ಚರಿಸಿವೆ. ಈ ಕಾಲಕ್ಕೆ ಅನುಗುಣವಾಗಿ ಶಾಸ್ತ್ರದ ಚೌಕಟ್ಟಿ ನಲ್ಲಿ ಪೂರ್ವಪಕ್ಷವನ್ನು ಇಟ್ಟುಕೊಂಡು ಮಾರ್ಪಾಡನ್ನು ತರುವಂತಹ ಅಗತ್ಯವಿದೆ. ಕಟೀಲಿನಲ್ಲಿ ನಡೆದ ಗೋಷ್ಠಿಯಲ್ಲಿ ಒಮ್ಮತಕ್ಕೆ ಬಂದು ನಿರ್ಣಯಿಸಲಾಗಿರುವುದು ಸಮಾಧಾನಕರ. ಇಂತಹ ಗೋಷ್ಠಿಗಳು ನಡೆಯುತ್ತಿರಲಿ ಎಂದು ಹೇಳಿದರು.
ಹೆರ್ಗ ರವೀಂದ್ರ ಭಟ್ ಆಶೌಚ, ಪರಿಷ್ಕರಣೆ ಅನಿವಾರ್ಯ ಮತ್ತು ಪ್ರಸ್ತುತತೆ ಬಗ್ಗೆ ವಿದ್ವಾನ್ ಚಂದ್ರಶೇಖರ ಅಡಿಗ ಕೌಂಜೂರು ಅಶೌಚ ಸ್ಮೃತಿಗ್ರಂಥಗಳು ಪರಸ್ಪರ ಅಭಿಪ್ರಾಯ ವ್ಯತ್ಯಾಸ ಮತ್ತು ಪರಿಹಾರ ವಿದ್ವಾನ್ ಕುಂಭಾಸಿ ಶ್ರೀಪತಿ ಉಪಾಧ್ಯಾಯ ದೇಶಾಂತರ ನಿರ್ಣಯ ಅಶೌಚ ವಕೃ ಸಪಿಂಡಾದಿ ವಿಚಾರದ ಬಗ್ಗೆ ಉಪನ್ಯಾಸ ಮಂಡಿಸಿದರು.ಕಲ್ಯ ಅಶೋಕ ಆಚಾರ್ಯ, ತಲಪಾಡಿ ವಿಷ್ಣುಮೂರ್ತಿ ಭಟ್, ಸುಬ್ರಹ್ಮಣ್ಯ ಭಟ್ ತೋಕೂರು, ದೇವೀಕುಮಾರ ಆಸ್ರಣ್ಣ, ಕೃಷ್ಣ ನೂರಿತ್ತಾಯ, ವಸಂತ ಭಟ್ ನೆಲ್ಲಿತೀರ್ಥ, ಅನಂತಕೃಷ್ಣ ಅಡಿಗಳ್ ಪುತ್ತಿಗೆ, ವಾಸುದೇವ ಭಟ್ ಪಾವಂಜೆ, ಹರೀಶ್ ಸರಳಾಯ ಪೆರ್ಣಂಕಿಲ, ಸಂತೋಷ್ ಕುಮಾರ್ಭಟ್ ಪ್ರಚ್ಛಕರಾಗಿದ್ದರು.ಬೆಂಗಳೂರುಪೂರ್ಣಪ್ರಜ್ಞವಿದ್ಯಾಪೀಠದ ವಿದ್ವಾನ್ ಸತ್ಯನಾರಾಯಣ ಆಚಾರ್ಯ, ಕಟೀಲು ದೇಗುಲದ ವಾಸುದೇವ ಆಸ್ರಣ್ಣ ವೇದವ್ಯಾಸ ತಂತ್ರಿ ವೇದಿಕೆಯಲ್ಲಿದ್ದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಅವರು ಸ್ವಾಗತಿಸಿದರು. ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವಧಾನಿ, ಅತ್ತೂರು ರವೀಂದ್ರ ಭಟ್ ಕಾರ್ಯಕ್ರಮ ನಿರೂಪಿ ಸಿದರು.
















