ಸುಳ್ಯ : ಸುಳ್ಯ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಬೈಪಾಸ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕರ ಸಹಿತ ರಾಜಕೀಯ ಮುಖಂಡರು ಮನವಿ ಮಾಡಿದರು.
ಕ್ಷೇತ್ರದಲ್ಲಿ ವಿವಿಧೆಡೆ ಸೇತುವೆಗಳು, ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತಿವೆ. ವಿವಿಧೆಡೆ ರಸ್ತೆ, ಸೇತುವೆಯ ಬೇಡಿಕೆಯಿದ್ದು ಇಲಾಖೆಯಿಂದ ಅನುದಾನ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು. ಎಂಜೀನಿಯರ್ ಅವರನ್ನು ಕರೆಸಿ ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿದರಲ್ಲದೆ ಇತರ ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಆನುದಾನ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಪುತ್ತೂರು-ಕಾಣಿಯೂರು-ಸುಬ್ರಹ್ಮಣ್ಯ ಹೆದ್ದಾರಿಯ ಬೊಬ್ಬೆಕೇರಿ ಎಂಬಲ್ಲಿ ಹೆದ್ದಾರಿ ಬದಿ ಕುಸಿದು ರಸ್ತೆ ಕಡಿತದ ಭೀತಿಯಲ್ಲಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಯಿಂದ ರಸ್ತೆ ಹಾಳಾಗಿದ್ದು, ಅವೈಜ್ಞಾನಿ ರೀತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಹೀಗಾಗಿದೆ ಎಂದು ರಾಧಾಕೃಷ್ಣ ಬೊಳ್ಳೂರು ದೂರಿದಾಗ ಗಮನಹರಿಸಲು ಸಚಿವರು ಎಂಜಿನಿಯರ್ಗಳಿಗೆ ಸೂಚಿಸಿದರು.
ಸುಳ್ಯದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸಿ ಎಂದು ಶಾಸಕಿ ಹೇಳಿದಾಗ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ ಪರಿಶೀಲನೆ ನಡೆಸುತ್ತೇನೆ ಎಂದರು.
ನಗರದಲ್ಲಿ ಒಳಚರಂಡಿ ಸಮಸ್ಯೆ ಸರಿಪಡಿಸುವಂತೆ, ಪುರಭವನ ಅಭಿವೃದ್ಧಿಗೆ ಅನುದಾನ ನೀಡುವಂತೆ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಮನವಿ ಸಲ್ಲಿಸಿದರು. ಜಟ್ಟಿಪಳ್ಳ-ಕೊಡಿಯಾಲ ರಸ್ತೆ ಅಭಿವೃದ್ಧಿಗೆ, ಸುಳ್ಯ ಮೂಲಕ ಕೇರಳ ಸಂಪರ್ಕ ರಸ್ತೆ, ಮಡಿಕೇರಿ ಸಂಪರ್ಕ ರಸ್ತೆ ಅಭಿವೃದ್ಧಿ, ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣ ಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸಚಿವರಿಗೆ ಅಹವಾಲು ಸಲ್ಲಿಸಲಾಯಿತು. ಲೋಕೋಪಯೋಗಿ ಇಲಾಖೆ ಶಿವಮೊಗ್ಗ ಕೇಂದ್ರ ವಲಯ ಮುಖ್ಯ ಎಂಜಿನಿಯರ್ ಜಗದೀಶ್, ಮಂಗಳೂರು ವೃತ್ತ ಅಧೀಕ್ಷಕ ಎಂಜಿನಿಯರ್ ಗೋಕುಲದಾಸ್, ಮಂಗಳೂರು ಇಇ ಅಮರನಾಥ್ ಜೈನ್, ಎಇಇ ರಾಜೇಶ್ ರೈ, ಸುಳ್ಯ ಎಂಜಿನಿಯರ್ಗಳಾದ ಗೋಪಾಲ್, ಪರಮೇಶ್ವರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಎಂ.ಬಿ.ಸದಾಶಿವ, ಹರೀಶ್ ಕಂಜಿಪಿಲಿ, ಹಮೀದ್ ಕುತ್ತಮೊಟ್ಟೆ ಕೃಷ್ಣಪ್ಪ ಜಿ., ಟಿ.ಎಂ.ಶಹೀದ್, ಎಂ.ವೆಂಪ್ಪ ಗೌಡ, ಶಿಲ್ಪಾ ಸುದೇವ್, ರಿಯಾಝ್, , ಮುಸ್ತಫಾ, ರಾಜು ಪಂಡಿತ್, ಪಿ.ಎಸ್.ಗಂಗಾಧರ್ ಮತ್ತಿತರರಿದ್ದರು.
ರಸ್ತೆ, ಸೇತುವೆಗೆ ಅನುದಾನ, ಸುಳ್ಯಕ್ಕೆ ಬೈಪಾಸ್ ರಸ್ತೆ ಒದಗಿಸಿ: ಸಚಿವ ಸತೀಶ್ ಜಾರಕಿಹೊಳಿಯವರಿಗೆ ಮನವಿ
