ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಅಮೃತ ಮಹೋತ್ಸವ-2025 ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯಲ್ಲಿ ನೂತನ ಅಕ್ಷರ ದಾಸೋಹ ಕೊಠಡಿಗೆ ಭೂಮಿ ಪೂಜೆ ಕಾರ್ಯಕ್ರಮ ಆ.18 ರಂದು ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು.ಬಳಿಕ ಮಾತನಾಡಿದ ಅವರು “ಈ ಶಾಲೆಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ನೂರಾರು ಮಂದಿ ಹಳೆ ವಿದ್ಯಾರ್ಥಿಗಳು ಇಂದು ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿಕೊಂಡಿದ್ದಾರೆ. ನಾವೆಲ್ಲರೂ ಹಳೆ ವಿದ್ಯಾರ್ಥಿಗಳಾಗಿದ್ದು ಈ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕಾದದ್ದು ನಮ್ಮ ಕರ್ತವ್ಯವೂ ಕೂಡ ಆಗಿದೆ” ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅವರು ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ 1.25 ಲಕ್ಷ ರೂಗಳ ತಮ್ಮ ಪ್ರಥಮ ಸಹಾಯಧನವನ್ನು ನೀಡುವ ಭರವಸೆ ನೀಡಿದರು. ಶಾಲಾ ಅಭಿವೃದ್ಧಿ ಕಾರ್ಯದಲ್ಲಿ ನಮ್ಮ ಸದಾ ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವದ ಲೋಗೋವನ್ನು ಮಾಜಿ ಸಚಿವರಾದ ಎಸ್.ಅಂಗಾರ ರವರು ಲೋಕಾರ್ಪಣೆಗೊಳಿಸಿ ಮಾತನಾಡಿ ಶುಭ ಹಾರೈಸಿದರು. ಅಮೃತ ಮಹೋತ್ಸವದ ಮನವಿ ಪತ್ರವನ್ನು ಪದ್ಮಶ್ರೀ ಗಿರೀಶ್ ಭಾರದ್ವಾಜ್ ರವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ ರವರು ವಹಿಸಿದ್ದರು.
ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಮುಸ್ತಫ ಜನತಾ, ಕೋಶಾಧಿಕಾರಿ ಅಶೋಕ್ ಪ್ರಭು, ಕಾಲೇಜು ಆಡಳಿತ ಸಮಿತಿ ಅಧ್ಯಕ್ಷರಾದ ಲಿಂಗಪ್ಪ ಗೌಡ, ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಬಡಿಗೇರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ್ ರೈ, ನ.ಪಂ.ಸದಸ್ಯ ಡೇವಿಡ್ ಧೀರ ಕ್ರಾಸ್ತ, ಶಾಲಾ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಮೃತ ಮಹೋತ್ಸವ ಸಮಿತಿಯ ಸದಸ್ಯರುಗಳಾದ ಡಾ. ರಂಗಯ್ಯ, ಚಂದ್ರಶೇಖರ್ ಪೆರಾಲು, ಡಾ.ಎನ್ ಎ ಜ್ಞಾನೇಶ್, ಇಂಜಿನಿಯರ್ ವಿಜಯ ಕುಮಾರ್ ಉಬರಡ್ಕ, ನವೀನ್ ಸೋಮಯಾಗಿ, ಡಿ ಎಸ್ ಗಿರೀಶ್, ಗೋಕುಲ್ ದಾಸ್, ಲೋಕಯ್ಯ ಗೌಡ ಅತ್ಯಾಡಿ, ಶಶಿಧರ ರೈ ಪಡ್ಡು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಹಸೈನಾರ್ ಜಯನಗರ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಂ.ಬಿ ಸದಾಶಿವ ಸ್ವಾಗತಿಸಿ ಜೊತೆ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ ವಂದಿಸಿದರು.
ಸುಳ್ಯ ಸರಕಾರ ಪದವಿ ಪೂರ್ವ ಕಾಲೇಜು ನೂತನ ಅಕ್ಷರ ದಾಸೋಹ ಕೊಠಡಿಗೆ ಭೂಮಿ ಪೂಜೆ,ಅಮೃತ ಮಹೋತ್ಸವ ಲೋಗೋ ಮತ್ತು ಮನವಿ ಪತ್ರ ಬಿಡುಗಡೆ

















