ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ವಿನೂತನ ಪ್ರಯತ್ನವಾಗಿ ಕಾಪಿಕೊ ಉದ್ಘಾಟನೆ ಹಾಗೂ ಕಾಫಿ ಬೆಳೆ ಉತ್ತೇಜನ ಕಾರ್ಯಗಾರಕ್ಕೆ ಚಾಲನೆ ಆ.೨೫ರಂದು ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಸಂಸದ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ, ಕಾಫಿ ಬೆಳೆ ಉತ್ತೇಜನ ಕಾರ್ಯಗಾರ ಸಮಿತಿ ಸುಳ್ಯ ವತಿಯಿಂದ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸುವರು. ಶಾಸಕಿ ಭಾಗೀರಥಿ ಮುರುಳ್ಯ, ಭಾರತೀಯ ಕಾಫಿ ಬೋರ್ಡ್ ಅಧ್ಯಕ್ಷ ದಿನೇಶ್ ಎಂ.ಜೆ., ಮಂಗಳೂರು ನಬಾರ್ಡ್ ಡಿಡಿ ಸಂಗೀತ ಕರ್ತ, ಮಂಗಳೂರು ತೋಟಗಾರಿಕಾ ಇಲಾಖೆ ಡಿಸಿ ಮಂಜುನಾಥ್, ಭಾರತೀಯ ಕಾಫಿ ಬೋರ್ಡ್ ಮಡಿಕೇರಿ ಉಪನಿರ್ದೇಶಕ ಡಾ.ವಿ.ಚಂದ್ರಶೇಖರ್ ಉಪಸ್ಥಿತರಿರುವರು. ಸಕಲೇಶಪುರ ಸೆವೆನ್ ಬೀನ್ ಟೀಮ್ ಅಧ್ಯಕ್ಷ ಡಾ.ಧರ್ಮರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸುಳ್ಯ ಭಾಗದಲ್ಲಿ ಈಗಾಗಲೇ ಅಡಿಕೆ ಹಳದಿ ರೋಗದಿಂದ ಕೃಷಿಕರು ಕಂಗೆಟ್ಟಿದ್ದು, ಕೃಷಿಕರು ಅಡಿಕೆ ಜೊತೆಗೆ ಉಪಬೆಳೆಯಾಗಿ ಕಾಫಿಯನ್ನು ಬೆಳೆ ಉತ್ತೇಜಿಸುವ ನಿಟ್ಟಿನಲ್ಲಿ ಕಾಫಿ ಬೆಳೆ ಕಾರ್ಯಗಾರ ಆಯೋಜಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಬ್ರಿಜೇಶ್ ಚೌಟ ಅವರು ಈ ಭಾಗದ ಕೃಷಿಕರಿಗೆ ನೀಡಿದ ಭರವಸೆಯಂತೆ ಕಾರ್ಯಗಾರ ನಡೆಯುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಕಾಫಿ ಬೆಳೆದು ಯಶಸ್ಸು ಕಂಡಿರುವ ಇಬ್ಬರು ಕೃಷಿಕರ ಯಶೋಗಾಥೆಯ ವಿಡೀಯೋವನ್ನೂ ಪ್ರಸಾರ ಮಾಡಲಾಗುವುದು. ಸುಳ್ಯದಲ್ಲಿ ಕಾಫಿ ಬೆಳೆಯುವ ಹಾಗೂ ಆಸಕ್ತ ಕೃಷಿಕರು ಕಾರ್ಯಗಾರದಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು. ಸುಳ್ಯ ಕಾಫಿ ಬೆಳೆಗೆ ಯೋಗ್ಯ ಎಂಬ ವರದಿ ಬಂದಿದೆ. ವಾಣಿಜ್ಯ ವಿಭಾಗದಿಂದ ಅನುಮೋದನೆ ಸಿಗಬೇಕಾಗಿದೆ. ಅದು ಆದಲ್ಲಿ ನಮಗೆ ಕಾಫಿ ಬೆಳೆಯಲು ಸರಕಾರದಿಂದ ಸೌಲಭ್ಯಗಳು ಲಭಿಸಲಿದೆ ಎಂದರು.
ಸರಕಾರ ರೈತರ ಬೆನ್ನಗೆ ನಿಲ್ಲಲಿ:
ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ಭಾಗದಲ್ಲಿ ಅಡಿಕೆ ಹಳದಿ ರೋಗದಿಂದ ರೈತರು ಕಂಗೆಟ್ಟಿದ್ದು, ಅವೇಶನ ನಡೆಯುತ್ತಿದ್ದು, ಈ ಸದನದಲ್ಲಿ ಈ ಭಾಗಕ್ಕೆ ಒತ್ತು ನೀಡಿ ರೈತರ ಬೆನ್ನಿಗೆ ಸರಕಾರ ನಿಲ್ಲಬೇಕು. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೃಷಿ ಸಚಿವರಲ್ಲಿ ಜಿಲ್ಲೆಯ ಶಾಸಕರು ರೈತರ ಬೆನ್ನಿಗೆ ನಿಲ್ಲುವ ಬಗ್ಗೆ ಪ್ರಸ್ತಾಪಿಸಬೇಕು. ಸಹಕಾರಿ ಸಂಘಗಳ ಮೂಲಕ ಝೀರೋ ಪರ್ಸೆಂಟ್ನಲ್ಲಿ ೧೦ ಲಕ್ಷದವರೆಗೆ ಸಾಲ ನೀಡಬೇಕು. ಆರ್ಥಿಕ ವರ್ಷದಲ್ಲಿರುವ ಶೇ.೩ ರಷ್ಟನ್ನೂ ಕಡಿಮೆ ಮಾಡಬೇಕು. ರಾಜಕೀಯ ರಹಿತವಾಗಿ ಈ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಸಂತೋಷ್ ಕುತ್ತಮೊಟ್ಟೆ, ಸಹ ಸಂಚಾಲಕ ರಾಮಕೃಷ್ಣ ಭಟ್, ಪ್ರಮುಖರಾದ ಎ.ಟಿ.ಕುಸುಮಾಧರ, ಶಶಿಕಲಾ ಎ.ನೀರಬಿದಿರೆ, ಜಯಪ್ರಕಾಶ್ ಮೊಗ್ರ, ಜಯರಾಮ, ವಿಕ್ರಂ ಅಡ್ಪಂಗಾಯ, ಸುಭೋದ್ ರೈ ಮೇನಾಲ, ಸುದರ್ಶನ ಪಾತಿಕಲ್ಲು, ನಾರಾಯಣ, ಶಿವಪ್ರಸಾದ್ ನಡುತೋಟ, ಸುಧಾಕರ ಕಾಮತ್, ಮೋಹನ್ರಾಮ್ ಸುಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಆ.೨೫: ಸುಳ್ಯದಲ್ಲಿ ಕಾಪಿಕೊ ಉದ್ಘಾಟನೆ ಮತ್ತು ಕಾಫಿ ಬೆಳೆ ಉತ್ತೇಜನ ಕಾರ್ಯಗಾರ : ವೆಂಕಟ್ ವಳಂಬೆ

















