ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ನಾನು ಸಭೆ ಕರೆದಾಗ ಆಗಾಗ ತಪ್ಪಿಸಿಕೊಳ್ಳುತ್ತಾರೆ ಇವತ್ತು ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರು ಆಕ್ರೋಶಗೊಂಡು ಸಭೆ ನಡೆಯುತ್ತಿದ್ದಂತೆ ಪೋನ್ ಮಾಡಿ ಜಿಲ್ಲಾಧಿಕಾರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.
29ರಂದು ತಾಲೂಕು ಪಂಚಾಯತ್ ನ ಶಾಸಕರ ಕಚೇರಿಯಲ್ಲಿ ಅಮೃತ್ 2 ಯೋಜನೆ ಅನುಷ್ಠಾನ ಸಮಿತಿ ಅಧಿಕಾರಿಗಳು, ಸುಳ್ಯ ನಗರ ಪಂಚಾಯತ್ ಅಧಿಕಾರಿಗಳನ್ನು ಕರೆದು ಕುಡಿಯುವ ನೀರು ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ರಸ್ತೆ ಅಗೆದು ಆಗಿರುವ ಸಮಸ್ಯೆ ಪರಿಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಭೆಗೆ ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಗೈರು ಹಾಜರಾಗಿದ್ದರು.
ಸುಳ್ಯ ಚೆನ್ನಕೇಶವ ದೇವರ ಜಾತ್ರೆಯ ಬ್ರಹ್ಮರಥೋತ್ಸವ ಜ.10ರಂದು ನಡೆಯಲಿದ್ದು ಅದಕ್ಕೂ ಮೊದಲು ಸುಳ್ಯ ಚೆನ್ನಕೇಶವ ದೇವಾಲಯ ಬಳಿಯಿಂದ ರಥಬೀದಿ ರಸ್ತೆ ಸರಿಪಡಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ ನೀಡಿದ್ದಾರೆ.
ಸುಳ್ಯ ಜಾತ್ರೆ ಸಮೀಪಿಸುತ್ತಿದೆ. ಚೆನ್ನಕೇಶವ ದೇವಸ್ಥಾನದ ಬಳಿಯ ರಸ್ತೆಯನ್ನು ಸರಿಪಡಿಸುವವರು ಯಾರು?. ಸುಳ್ಯ ಮುಖ್ಯ ಪೇಟೆಯ ರಸ್ತೆ ಸಮಸ್ಯೆ, ನಗರ ಪಂಚಾಯತ್ ಎದುರಿನ ರಸ್ತೆ ಹೀಗೆ ಅಗೆದು ಹಾಕಿರುವುದನ್ನು ಸರಿಪಡಿಸಿ ಎಂದು ಸೂಚಿಸಿದರು. ಆಗ ಉತ್ತರಿಸಿದ ಇಂಜಿನಿಯರ್ ಶೋಭಾರಾಣಿಯವರು” ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಅಗೆದ ರಸ್ತೆಯನ್ನು ನಾವೇ ಸರಿಪಡಿಸುತ್ತೇವೆ.
ಈಗಾಗಲೇ ಕುರುಂಜಿಗುಡ್ಡೆ, ಕಲ್ಲುಮುಟ್ಟು ಇಲ್ಲಿ ಅಗೆದ ಭಾಗ ರಸ್ತೆ ಪಡಿಸಲಾಗಿದೆ. ಚೆನ್ನಕೇಶವ ದೇವಸ್ಥಾನದ ರಸ್ತೆಯನ್ನು ಜಾತ್ರೆಗೂ ಮೊದಲೇ ನಾವು ಸರಿಪಡಿಸಿ ಕೊಡುತ್ತೇವೆ ಎಂದು ಅಧಿಕಾರಿ ಭರವಸೆ ನೀಡಿದರು.
ಕುಡಿಯುವ ನೀರಿನ ಕಾಮಗಾರಿಯ ವಿವರವನ್ನು ಶಾಸಕರು ಕೇಳಿದಾಗ, “ಸುಳ್ಯ ನಗರದಲ್ಲಿ ಕುರುಂಜಿಗುಡ್ಡೆ, ಕಲ್ಲುಮುಟ್ಟು, ಬೀರಮಂಗಲ, ಜಯನಗರ, ಬೋರುಗುಡ್ಡೆಯಲ್ಲಿ ಟ್ಯಾಂಕ್ ಕೆಲಸ ಆಗಿದೆ. ಬೋರುಗುಡ್ಡೆಯಲ್ಲಿ 50 ಮೀಟರ್ ಪೈಪ್ ಲೈನ್ ಅಳವಡಿಕೆ ಬಾಕಿ ಇದ್ದು, ಅಲ್ಲಿ ಜಾಗದ ಸಮಸ್ಯೆ ಇದೆ. ಅದನ್ನು ಸರಿಪಡಿಸಿದರೆ ಕೆಲಸ ಆಗುತ್ತದೆ. ನಮಗೆ ಕಳೆದ ಜುಲೈ ಯಲ್ಲಿ ಮುಗಿಸಿ ಕೊಡಬೇಕಿತ್ತು. ಮಳೆಯಿಂದ ಸಾಧ್ಯವಾಗಿಲ್ಲ. ಈಗ ಜ.15ರೊಳಗೆ ಪೂರ್ತಿ ಮಾಡಬೇಕಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ನ.ಪಂ. ಮುಖ್ಯಾಧಿಕಾರಿ ಬಸವರಾಜ, ಅಮೃತ್ 2 ಯೋಜನೆಯ ಎ.ಇ. ಶ್ರೀಕಾಂತ್, ನ.ಪಂ. ಮಾಜಿ ಅಧ್ಯಕ್ಷರಾದ ಶಶಿಕಲಾ, ವಿನಯಕುಮಾರ್ ಸದಸ್ಯರುಗಳಾದ ಕಿಶೋರಿ ಶೇಟ್, ಬುದ್ಧ ನಾಯ್, ನಾರಾಯಣ ಶಾಂತಿನಗರ, ಶೀಲಾ ಕುರುಂಜಿ, ಸುಭೋದ್ ಶೆಟ್ಟಿ ಮೇನಾಲ ಇತರರು ಉಪಸ್ಥಿತರಿದ್ದರು.



































