ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ ಕಾರ್ಯಕ್ರಮ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಜು. 22 ರಂದು ನಡೆಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ” ಆಟಿ ಆಚರಣೆಯಿಂದ ಹಿಂದಿನ ಜೀವನದ ಅನುಭವವನ್ನು ಮತ್ತೆ ನೆನಪಿಸಿದಂತಾಗುದೆ.ನಮ್ಮ ಹಿರಿಯರು ಮಾಡುವ ಕಾರ್ಯ ಮೂಢನಂಬಿಕೆಯಲ್ಲ. ಮೂಲ ನಂಬಿಕೆಯಾಗಿದ್ದು, ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳುವುದು ಅಗತ್ಯ” ಎಂದರು. ಸಾಮಾಜಿಕ ಪಿಡುಗಾದ ಲಂಚ ಭ್ರಷ್ಟಾಚಾರವನ್ನು ನಾವೆಲ್ಲರೂ ಸೇರಿ ನಿರ್ಮೂಲನೆ ಮಾಡೋಣ. ನನ್ನಲ್ಲಿಗೆ ಯಾರು ಬಂದು ಹೇಳಿದರೂ ಅವರಿಗೆ ಸಹಕಾರ ಕೊಟ್ಟು ಸರಕಾರಿ ಕಚೇರಿಯಲ್ಲಿ ಆಗಬೇಕಾದ ಅವರ ಕೆಲಸ ಮಾಡಿಕೊಡುತ್ತೇನೆ ” ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಆಟಿ ಮತ್ತು ಪತ್ರಿಕಾ ದಿನದ ಕುರಿತು ವಿಶೇಷ ಉಪನ್ಯಾಸ ನೀಡಿ, “ಪತ್ರಿಕೆಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದ್ದಿ ಬಿಡುಗಡೆ ಪತ್ರಿಕೆ ಕಾಲಕಾಲಕ್ಕೆ ತಕ್ಕಂತೆ ಬದಲಾಗಿ ಡಿಜಿಟಲ್ ಆಗಿ ಸುದ್ದಿ ತಲುಪಿಸುವ ಕಾರ್ಯ ಮಾಡುತ್ತಿದೆ. ಈಗ ಜನರು ಗೂಗಲ್ ನಿಂದ ಡೌನ್ಲೋಡ್ ಮಾಡುವ ಕಾರ್ಯ ಮಾಡುತ್ತಾರೆ. ನಾವು ಸಾಧ್ಯವಾದಷ್ಟು ಅಪ್ಲೋಡ್ ಮಾಡುವ ಕೆಲಸ ಮಾಡಬೇಕು. ಪತ್ರಿಕೆಗಳು ಆ ಕಾರ್ಯ ಮಾಡುತ್ತಿದೆ” ಎಂದರು.
ಪ್ರಕೃತಿ ಬದಲಾಗುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಿಂದೆ ಆಟಿ ತಿಂಗಳು ಕಷ್ಟಕರವಾಗಿದ್ದು, ಆಟಿ ತಿಂಗಳಿನಲ್ಲಿ ಶುಭಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಆಟಿಯಲ್ಲಿ ಮದುವೆಯೂ ನಡೆಯುತ್ತದೆ. ಬೇರೆ ಶುಭಕಾರ್ಯಗಳೂ ನಡೆಯುತ್ತವೆ” ಎಂದು ಅವರು ಹೇಳಿದರು.
ಕೆಜೆಯು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ವಿತ್ ಕಾಳಂಮನೆ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಕೆಜೆಯು ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಕೆಜೆಯು ಜಿಲ್ಲಾಧ್ಯಕ್ಷ ಈಶ್ವರ ವಾರಣಾಶಿ, ಪ್ರೆಸ್ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕೆಜೆಯು ತಾಲೂಕು ಘಟಕದ ಗೌರವಾಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿ ಅನಿಲ್ ಕಳಂಜ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕರಾದ ಅಪ್ಪಕುಂಞಿ ನಾರ್ಕೋಡು ಹಾಗೂ ಎಸ್.ಎನ್. ಪ್ರಸಾದ್ ಪಂಜಿಕಲ್ಲುರವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಸುದ್ದಿ ಬಿಡುಗಡೆ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿರುವ ಆಂದೋಲನವಾದ ” ಉತ್ತಮ ಸೇವೆಗೆ ಪುರಸ್ಕಾರ – ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ” ಫಲಕವನ್ನು ಶಾಸಕರಿಗೆ ಮತ್ತು ಅತಿಥಿಗಳಿಗೆ ನೀಡಿ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರತಿಜ್ಞೆ ಬೋಧಿಸಿದ ಹರೀಶ್ ಬಂಟ್ವಾಳ್ ರವರು ” ಸರಕಾರಿ ಕಚೇರಿಗಳಲ್ಲಿ ಕೆಲಸದ ವಿಳಂಬ ಹಾಗೂ ಲಂಚದ ಹಾವಳಿ ತಡೆಗಟ್ಟಲು ಶಾಸಕರು ಪ್ರತೀವಾರ ಜನರ ಅಹವಾಲು ಸ್ವೀಕರಿಸಿ , ಅಧಿಕಾರಿಗಳನ್ನು ಆಗಲೇ ಕರೆದು ಕೆಲಸ ಆಗದಿರುವ ಬಗ್ಗೆ ಪ್ರಶ್ನಿಸಿ, ಕೂಡಲೇ ಕೆಲಸ ಆಗುವಂತೆ ತಾಕೀತು ಮಾಡಬೇಕು ಹಾಗೂ ಲಂಚ ಪಡೆದ ಬಗ್ಗೆ ಜನರು ಹೇಳಿದರೆ ಆ ಹಣವನ್ನು ಜನರಿಗೆ ವಾಪಸ್ ತೆಗೆಸಿಕೊಡಬೇಕು ” ಹೇಳಿದರು.
ಚೈತ್ರ ವಿನಯ್ ಪ್ರಾರ್ಥನೆಗೈದರು, ಜಯಶ್ರೀ ಕೊಯಿಂಗೋಡಿ ಸ್ವಾಗತಿಸಿ, ರಮೇಶ್ ನೀರಬಿದಿರೆ ಮತ್ತು ಅನಿಲ್ ಕಳಂಜ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಶ್ರೀಜಿತ್ ಸಂಪಾಜೆ ವಂದಿಸಿದರು.
ಕೆಜೆಯು ಪೂರ್ವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಖ್ಯಾತ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯರವರಿಂದ ಮಿಮಿಕ್ರಿ, ಬಳಿಕ ಆಟಿ ಖಾದ್ಯಗಳೊಂದಿಗೆ ವಿಶೇಷ ಸಹಭೋಜನ ನಡೆದು, ಚೆನ್ನೆಮಣೆ ಸೇರಿದಂತೆ ವಿವಿಧ ಆಟಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ





































































