ಮಾಸ್ ಲಿಮಿಟೆಡ್ ಸಂಸ್ಥೆಯ ಸುಳ್ಯ ಶಾಖೆಯ ಅಡಿಕೆ ಸಂಸ್ಕರಣಾ ಘಟಕವು ಫೆ. 28 ರಂದು ಸುಳ್ಯದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು
ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಯವರು ಹೇಳಿದರು.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಹಕಾರ ರತ್ನ ದಿ. ವಾರಣಾಶಿ ಸುಬ್ರಾಯ ಭಟ್ರವರ ಪ್ರಯತ್ನ ಹಾಗೂ ಸಹಕಾರ ರತ್ನ ಎಂ.ಎನ್. ರಾಜೇಂದ್ರಕುಮಾರ್ ಇವರ ಪ್ರೋತ್ಸಾಹದೊಂದಿಗೆ ಪ್ರಾರಂಭಗೊಂಡ ಮಾಸ್ ಸಂಸ್ಥೆ ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು ಸಂಸ್ಥೆಯು ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟಿದೆ. ಹತ್ತು ತಿಂಗಳ ಹಿಂದೆ ನಾನು ಸಂಸ್ಥೆಯ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ವಹಿವಾಟನ್ನು ವೃದ್ಧಿಗೊಳಿಸುವ ಗುರಿ ಹೊಂದುವುದರೊಂದಿಗೆ ವರ್ಷ ಪೂರೈಸುವುದರೊಳಗೆ ಮೂರರಿಂದ ನಾಲ್ಕು ಶಾಖೆಗಳನ್ನು ತೆರೆಯುವುದು ಹಾಗೂ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕಾರ್ಯ ಪುನರಾರಂಭಿಸುವುದು ಎಂಬ ವಾಗ್ದಾನದಂತೆ ಮುನ್ನಡೆಯುತ್ತಿದ್ದೇವೆ. ಈಗಾಗಲೇ ಜುಲೈ 2024ರಲ್ಲಿ ಕಾವು ಶಾಖೆಯನ್ನು ಹಾಗೂ ನವೆಂಬರ್ 2024ರಲ್ಲಿ ನಿಂತಿಕಲ್ಲು ಶಾಖೆಯನ್ನು ತೆರೆಯಲಾಗಿದೆ. ಅಲ್ಲದೇ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇಖಡ 40ರಷ್ಟು ವೃದ್ಧಿಯಾಗಿದೆ ಎಂದರು.
ಫೆ. 28 ಶುಕ್ರವಾರದಂದು ಮಾಸ್ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಮತ್ತೆ ಆರಂಭಗೊಳ್ಳಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದು ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೂಟ್ಟು, ಡಿಸಿಸಿ ಬ್ಯಾಂಕ್ ಎಸ್.ಎನ್. ಮನ್ಮಥ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಹೇಳಿದರು.
ಮಾಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ ಮಹಾಬಲೇಶ್ವರ ಭಟ್, ಚೀಫ್ ಮಾರ್ಕೆಟಿಂಗ್ ಆಫೀಸರ್ ಲೋಕೇಶ್ ಕೆ.ಎಂ., ಸುಳ್ಯ ಬ್ರಾಂಚ್ ಮೇನೇಜರ್ ಧನಂಜಯ ಮೇರ್ಕಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಫೆ.28ಕ್ಕೆ ಮಾಸ್ ಲಿಮಿಟೆಡ್ ಸಂಸ್ಥೆಯ ಸುಳ್ಯ ಶಾಖೆಯ ಅಡಿಕೆ ಸಂಸ್ಕರಣಾ ಘಟಕ ಸುಳ್ಯದಲ್ಲಿ ಉದ್ಘಾಟನೆ
