ಅಭಿಮಾನ ಒಳ್ಳೆಯದೇ.,ಅಂಧಾಭಿಮಾನ ಜೀವಕ್ಕೇ ಮಾರಕ

ಐಪಿಎಲ್‌ನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಇದು ಎಲ್ಲಿಯವರೆಗೆ ಎಂದರೆ ತಾಯಿಯೊಬ್ಬಳು ಒಂಬತ್ತು ತಿಂಗಳುಗಳ ಕಾಲ ಉದರದೊಳಗೆ ಹೊತ್ತುಕೊಂಡು ಪೋಷಿಸಿದ, ತಂದೆಯೊಬ್ಬ ತನ್ನ ಯೌವನವನ್ನೆಲ್ಲಾ ಸವೆಸಿ ಎರಡು ದಶಕಗಳಷ್ಟು ಕಾಲ ಸಾಕಿದ, ಹೆತ್ತವರಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಜೀವವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುವಷ್ಟು, ಉಸಿರನ್ನೇ ಚೆಲ್ಲಿ ಬಿಡುವಷ್ಟು…
ಜನ ಮರುಳೋ, ಜಾತ್ರೆ ಮರುಳೋ ಗೊತ್ತಿಲ್ಲ. ತಮ್ಮ ಖುಷಿಗಳನ್ನೆಲ್ಲಾ ತ್ಯಾಗ ಮಾಡಿ, ಕುಟುಂಬವನ್ನೇ ದೂರ ಇಟ್ಟು ಹಗಲು ರಾತ್ರಿ ಈ ದೇಶದ ಜನರಿಗಾಗಿ ದುಡಿಯುವ ಸೈನಿಕರ ಮೇಲೆ ಇಲ್ಲದ ಅಭಿಮಾನ, ತಮ್ಮ ಬದುಕನ್ನೇ ಸವೆಸಿ ಮಕ್ಕಳ ಬದುಕಿಗೆ ಶ್ರಮಿಸುವ ಹೆತ್ತವರ ಮೇಲೆ ಇಲ್ಲದ ಅಭಿಮಾನ ಕ್ರಿಕೆಟ್‌ ಆಟಗಾರರ ಮೇಲೆಯೋ, ಸಿನಿಮಾ ಮಂದಿಯ ಮೇಲೆಯೋ, ರಾಜಕಾರಣಿಗಳ ಮೇಲೆಯೋ ತೋರಿಸುವ ಜನರ ಪರಿ ನೋಡುವಾಗ ಜನರ ಯೋಚನಾಲಹರಿ ಎತ್ತ ಸಾಗಿದೆ ಎಂಬುದು ಅರಿವಾಗಬಹುದು. ಅಷ್ಟಕ್ಕೂ ಕ್ರಿಕೆಟ್‌ ಆಟಗಾರರ ಮೇಲೆ, ಸಿನಿಮಾ ಮಂದಿಯ ಮೇಲೆ ಅಭಿಮಾನ ತಪ್ಪಲ್ಲ. ಆದರೆ ಅದೇ ಅಭಿಮಾನ ಅಂಧಾಭಿಮಾನವಾಗಿ ಮಾರ್ಪಾಡಾದರೆ ಅದರ ಪರಿಣಾಮ ಎಂತಹುದು ಎಂಬುದನ್ನು ಮೊನ್ನೆಯ ಆರ್‌ಸಿಬಿ ಕಪ್‌ ಗೆದ್ದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಗಮನಿಸಿದ್ದೇವೆ.
ಆರ್‌ಸಿಬಿ ಕಪ್‌ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಆದಂತಹ ಕಾಲ್ತುಳಿತ ಅವಘಡದಲ್ಲಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡರು. ಎಲ್ಲರೂ ಇನ್ನೂ ಬದುಕು ಕಟ್ಟಿಕೊಳ್ಳಬೇಕಾದ ಸಣ್ಣ ವಯಸ್ಸಿನ ಮಂದಿ. 20-30 ವರ್ಷದಲ್ಲಿ ಇಂತಹ ಅಂಧಾಭಿಮಾನಕ್ಕೆ ಬಿದ್ದು ಜೀವವನ್ನೇ ಕಳೆದುಕೊಂಡ ಯುವಕ-ಯುವತಿಯರನ್ನು ನೋಡುವಾಗ ಕರುಳು ಚುರುಕ್‌ ಎನ್ನದೇ ಇರದು. ಆಗ ತಾನೇ ಕೆಲಸಕ್ಕೆ ಸೇರಿದವರು, ಇಂಟರ್‌ ವ್ಯೂ ಮುಗಿಸಿ ಬಂದು ಕೆಲಸಕ್ಕಾಗಿ ಕಾಯುತ್ತಿರುವ ಮಂದಿ, ಇನ್ನೂ ಓದುವ ಹಂತದಲ್ಲಿರುವ ಯುವಕ-ಯುವತಿಯರೇ ಇನ್ನೆಂದೂ ಬಾರದ ಲೋಕಕ್ಕೆ ಹೋಗಿದ್ದಾರೆ.
ಕ್ರಿಕೆಟ್‌ನಂತಹ ಯಾವುದೇ ಆಟಗಳನ್ನು ಸುಮ್ಮನೇ ಆಡಿಸುವುದಿಲ್ಲ. ಅದರ ಹಿಂದೆ ಲಾಭದ ಉದ್ದೇಶವಿದ್ದೇ ಇರುತ್ತದೆ. ಗೆದ್ದವರು ಕೋಟಿ ಕೋಟಿ ಕೊಂಡೊಯ್ಯುತ್ತಾರೆ. ಹೋಗಲಿ ಬಿಡಿ, ಅವರ ಶ್ರಮಕ್ಕೆ ಸಂದದ್ದು ಎಂದುಕೊಳ್ಳೋಣ. ಆದರೆ ಅದೇ ಸಂಭ್ರಮದಲ್ಲಿ ಮೈಮರೆತು ನಡು ರಸ್ತೆಯಲ್ಲಿ ಹುಚ್ಚೆದ್ದು ಕುಣಿಯುವ, ರಸ್ತೆ ಬ್ಲಾಕ್‌ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸುವ ಮಂದಿಯ ಅಭಿಮಾನದ ಅತಿರೇಕ ಒಪ್ಪುವಂತದ್ದಲ್ಲ. ಇಂತಹ ಹುಚ್ಚು ಅಭಿಮಾನ ವ್ಯಕ್ತಪಡಿಸುವವರಿಗೆ ಸಿಗುವುದಾದರೂ ಏನು?
ಅಭಿಮಾನಿಸಿ ತಪ್ಪಲ್ಲ. ಆದರೆ ಅದೇ ಅಭಿಮಾನ ಜೀವ ಕಳೆದುಕೊಳ್ಳುವಷ್ಟರ ಮಟ್ಟಿಗೆ ಹೋಗುವ ಹುಚ್ಚು ಅಭಿಮಾನ ಆಗದಿರಲಿ. ಅದು ಕ್ರಿಕೆಟ್‌ ಆಗಲೀ, ಕ್ರಿಕೆಟಿಗರು ಆಗಲಿ, ಅಥವಾ ರಾಜಕಾರಣಿ, ಇನ್ಯಾರೇ ಆಗಲಿ. ವ್ಯಕ್ತಿಗಳ ಮೇಲಿನ ಹುಚ್ಚು ಅಭಿಮಾನ ಖಂಡಿತಾ ತಪ್ಪು. ಬಹುಶಃ ಇಂತಹ ಹುಚ್ಚು ಅಭಿಮಾನಕ್ಕೆ ಬಿದ್ದು ಜೀವ ಕಳೆದುಕೊಂಡರೆ ಯಾರ ಮೇಲೆ ಅಭಿಮಾನ ಇಟ್ಟಿದ್ದೀರೋ ಆ ವ್ಯಕ್ತಿ ಹೋದ ನಿಮ್ಮ ಜೀವವನ್ನು ಮರಳಿ ತರುವುದಿಲ್ಲ, ನಿಮ್ಮ ಕುಟುಂಬಕ್ಕೂ ಕಿಂಚಿತ್‌ ನೆರವಾಗುವುದಿಲ್ಲ. ಈ ಸತ್ಯವನ್ನು ಮೊದಲು ಅರಿತುಕೊಂಡರೆ ಜೀವವನ್ನೇ ಕಳೆದುಕೊಳ್ಳುವಂತಹ ಘಟನೆಗಳು ತಪ್ಪಬಹುದೇನೋ.
ಇಂತಹ ದುರ್ಘಟನೆಗಳು ನಡೆದಾಗ ಸರ್ಕಾರದಿಂದ ಒಂದಷ್ಟು ಪರಿಹಾರ ಘೋಷಣೆಯಾಗಬಹುದು. ಅದು ಜೀವ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸಿಗುತ್ತದೋ, ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಸಿಕ್ಕರೂ ಕೇವಲ ಕಾಸಷ್ಟೇ. ಹೋದ ಜೀವ ಎಂದೂ ಮರಳಿ ಬಾರದು. ಇನ್ನು ಇಂತಹ ಘಟನೆಗಳಾದಾಗ ಆಡಳಿತ ಪಕ್ಷ-ವಿರೋಧ ಪಕ್ಷಗಳು ಅವುಗಳಲ್ಲಿ ತಮ್ಮ ಲಾಭಗಳನ್ನು ಹುಡುಕುತ್ತವೆಯೇ ಹೊರತು ಹೋದ ಜೀವಗಳ ಬಗ್ಗೆ ಮರುಗುವುದಿಲ್ಲ. ಕಳೆದುಕೊಂಡ ನೋವು ಸರ್ಕಾರಕ್ಕೂ ಅಲ್ಲ, ಕ್ರಿಕೆಟ್‌ ಆಟಗಾರರಿಗೂ ಅಲ್ಲ, ನೀವು ಯಾರ ಮೇಲೆ ಅಭಿಮಾನ ಇಟ್ಟಿದ್ದೀರೋ ಆ ವ್ಯಕ್ತಿಗೂ ಅಲ್ಲ…ಕಳೆದುಕೊಂಡ ನೋವು ಶಾಶ್ವತವಾಗಿ ಉಳಿಯುವುದು ಮನೆ ಮಗ, ಮಗಳನ್ನು ಕಳೆದುಕೊಂಡ ಹೆತ್ತವರಲ್ಲಿ, ಒಡ ಹುಟ್ಟಿದವರಲ್ಲಿ ಅಷ್ಟೇ.
ಅಭಿಮಾನ ಒಳ್ಳೆಯದೇ..ಆದರೆ ಅಂಧಾಭಿಮಾನ ಖಂಡಿತಾ ಒಳ್ಳೆಯದಲ್ಲ. ಅಂಧಾಭಿಮಾನ ಜೀವನಕ್ಕೂ ಮಾರಕ, ಜೀವಕ್ಕೂ ಮಾರಕ.✍️ಧನ್ಯಾ ಬಾಳೆಕಜೆ

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top