ಸುಳ್ಯ ತಾಲೂಕು ಭ್ರಷ್ಟಾಚಾರ ಮುಕ್ತ ತಾಲೂಕು ಆಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ವತಿಯಿಂದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸಮ್ಮಾನಿಸಿ ಅವರು ಮಾತನಾಡಿದರು. ತಾಲೂಕಿನ ತಹಶೀಲ್ದಾರ್ಗಳು ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಲಿ, ಗ್ರಾಮದಲ್ಲಿ ಎಷ್ಟು ಟಾರ್ಪಲಿನಲ್ಲಿ ಮನೆಗಳಿವೆ ಎಂಬುದು ಗೊತ್ತಾಗುತ್ತದೆ. ಮನೆಗಳಿಗೆ ಅಡಿಸ್ಥಳ ಇಲ್ಲದವರಿಗೆ ಅಡಿಸ್ಥಳ ನೀಡುವ ಕೆಲಸ ಆಗಲಿ ಅದುವೇ ಸ್ವಾತಂತ್ರ್ಯ ಎಂದರು. ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ರಾಮಯ್ಯ ಗೌಡರ ಪ್ರತಿಮೆ ನಿರ್ಮಿಸಲು ಪ್ರಯತ್ನಿಸಲಾಗುವುದು, ಈ ಮೂಲಕ ಸುಳ್ಯ ಪ್ರವಾಸಿ ತಾಣವಾಗಲಿ. ಭ್ರಷ್ಟಚಾರ ಮುಕ್ತ ತಾಲೂಕು, ಸಾರ್ವಜನಿಕರಿಗೆ ಶೀಘ್ರ ಸೇವೆ ಸಿಗುವಂತಹ ತಾಲೂಕು ನಮ್ಮದಾಗಲಿ ಎಂದು ಅವರು ಹೇಳಿದರು.
ಸುಳ್ಯ ತಹಶೀಲ್ದಾರ್ ಮಂಜುಳ ಎಂ. ಅವರು ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ ಮಾತನಾಡಿ, ಸುಮಾರು ವರ್ಷಗಳ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಬಂದು, ಇಂದು ನಾವು ಶಕ್ತಿಶಾಲಿ ರಾಷ್ಟವಾಗಿ ಹೊರಹೊಮ್ಮಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು, ದೇಶದ ಸಾರ್ವಭೌಮತ್ವವನ್ನು ನಾಡಿನ ಎಲ್ಲೆಡೆ ಸಾರುವಂತಹ ಗುರುತರವಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, ಅನಕ್ಷರತೆ, ಬಡತನ ನಿರ್ಮೂಲನೆ ಆಗಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಹೆಜ್ಜೆ ಇಡುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ತಾಲೂಕು ಅಧ್ಯಕ್ಷ ಶಾಹೂಲ್ ಹಮೀದ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫಾ, ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಕಾಲೇಜಿನ ಪ್ರಾಂಶುಪಾಲ ಮೋಹನ ಗೌಡ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ನ.ಪಂ.ಮುಖ್ಯಾಧಿಕಾರಿ ಬಸವರಾಜ, ಉಪಾಧ್ಯಕ್ಷ ಬುದ್ಧ ನಾಯ್ಕ, ನ.ಪಂ. ಸದಸ್ಯರು, ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಽಕಾರಿ ರಾಜಣ್ಣ ಸ್ವಾಗತಿಸಿ, ಬಿಇಒ ಶೀಥಲ್ ಯು.ಕೆ. ವಂದಿಸಿದರು. ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಪಥಸಂಚಲನ-ಸಮ್ಮಾನ:
ತಹಶೀಲ್ದಾರ್ ಅವರು ತೆರದ ವಾಹನದಲ್ಲಿ ವಂದನೆ ಸ್ವೀಕರಿಸಿದರು. ಬಳಿಕ ಸುಳ್ಯ ಎಸೈ ಸಂತೋಷ್ ಅವರ ನೇತೃತ್ವದಲ್ಲಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಸಾಧಕರನ್ನು, ಮಾಜಿ ಸೈನಿಕರನ್ನು ಗೌರವಿಸಲಾಯಿತು
ಸುಳ್ಯ ತಾಲೂಕು ಭ್ರಷ್ಟಾಚಾರ ಮುಕ್ತ ತಾಲೂಕು ಆಗಲಿ : ಶಾಸಕಿ ಭಾಗೀರಥಿ ಮುರುಳ್ಯ

















