ಪೆರಾಜೆ ಗ್ರಾಮದ ಕುಂಬಳಚೇರಿ ಸಹಕಾರಿ ಸಭಾ ಭವನದಲ್ಲಿ ಪಾಣತ್ತೂರು-ಕಲ್ಲಪಳ್ಳಿ, ಬಡ್ಡಡ್ಕ, ಕೂರ್ನಡ್ಕ, ಕುಂದಲ್ಪಾ ಡಿ, ಮಾರ್ಗವಾಗಿ ಕುಂಬಳಚೇರಿ ಮುಖಾಂತರ ಕಾಸ್ಪಾಡಿ ಎನ್ನುವಲ್ಲಿ 275 ನೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನಿರೀಕ್ಷಿತ ಅಂತರ್ ರಾಜ್ಯ ದ್ವಿಪಥ ರಸ್ತೆ ನಿರ್ಮಾಣದ ಗುರಿ ಹೊಂದಿರುವ ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿ ಕರೆದ ಸಭೆ ಕರೆಯಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಅವರು ಈಗಿರುವ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಪರಿವರ್ತನೆ ಮಾಡಿದಲ್ಲಿ ಪೆರಾಜೆ ಗ್ರಾಮ ಅಭಿವೃದ್ಧಿ ಹೊಂದುವುದಲ್ಲದೆ ಊರಿನ ಶಾಸ್ತವು ದೇವಸ್ಥಾನ, ಸಮೀಪದ ತೊಡಿಕಾನ ಮಲ್ಲಿಕಾರ್ಜುನ ದೇವಾಲಯ ಅಲ್ಲದೇ ಕೊಡಗಿನ ಭಾಗಮಂಡಲ, ತಲಕಾವೇರಿ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ, ಕೊಡಗು ಜಿಲ್ಲೆ ಮತ್ತಷ್ಟು ಪ್ರವಾಸೋದ್ಯಮದ ಲಾಭ ಪಡೆಯಲಿದೆ. ಹೀಗಾಗಿ ಮೇಲ್ದರ್ಜೆಗೆ ಏರುವ ರಸ್ತೆ ಹಾದು ಹೋಗುವ ಭೂ ಮಾಲೀಕರು ಭೂಮಿಗಳನ್ನು ಬಿಟ್ಟು ಕೊಟ್ಟಲ್ಲಿ ನಿಮ್ಮೆಲ್ಲರ ಸಹಕಾರದಲ್ಲಿ ಮಲೆನಾಡು ಜಂಟಿ ಕ್ರಿಯಾ ಸಮಿತಿ ಕೇಂದ್ರ, ಕೇರಳ, ಕರ್ನಾಟಕಗಳ ಸಹಯೋಗದಲ್ಲಿ ಅಂತಾರಾಜ್ಯ ರಾಷ್ಟ್ರೀಯ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ ಹಾಲಿ ರಸ್ತೆಯನ್ನು ಅಭಿವೃದ್ಧಿಗೊಳಿಸುವ ರಸ್ತೆ ಕಾರಿಡಾರ್ ಯೋಜನೆಯಲ್ಲಿ ನನ್ನ ಸ್ವಾಧೀನದ ಕೃಷಿ ಭೂಮಿ ಸೇರಲಿದೆ. ಇದರಿಂದ 150 ರಷ್ಟು ರಬ್ಬರ್ ಮರಗಳು ಸಹ ನಷ್ಟವಾಗಲಿದೆ. ಆದರೆ ಮುಂದಿನ ಪೀಳಿಗೆಯ ಒಳಿತಿಗಾಗಿ ನನ್ನ ಪಟ್ಟಾ ಭೂಮಿಯನ್ನು ಸಂತೋಷದಿಂದ ನೀಡುತ್ತೇನೆ ಎಂದು ಸಭೆಗೆ ತಿಳಿಸಿದರಲ್ಲದೆ ರಸ್ತೆ ಬದಿಯ ಎಲ್ಲಾ ಗ್ರಾಮಸ್ಥರು ನೂತನ ಯೋಜನೆಗೆ ಸಹಕರಿಸಲು ಕೋರಿಕೊಂಡರು.
ಗ್ರಾಮಸ್ಥರಿಂದ ಭೂಮಿ ಬಿಟ್ಟು ಕೊಡಲು ಯಾವುದೇ ಅಭ್ಯಂತರವಿಲ್ಲದೆ ರಸ್ತೆ ಪ್ರಾಧಿಕಾರ ಭೂಮಿ, ಮನೆ, ತೋಟ ಕಳೆದುಕೊಳ್ಳುವ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ಬೇಡಿಕೆ ಮಂಡಿಸಿದರು.ಹಾಗಿದ್ದಲ್ಲಿ ತಮ್ಮ ಭೂಮಿ ನೀಡಿ ರಸ್ತೆ ಯೋಜನೆಗೆ ಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.
ವೇದಿಕೆಯಲ್ಲಿ ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷ ಎನ್. ಬಿ. ನಂಜಪ್ಪ, ಕಲ್ಲಪಳ್ಳಿ ವಾರ್ಡ್ ಸದಸ್ಯ ಪಂಚಾಯತ್ ಸದಸ್ಯ ರಾಧಾಕೃಷ್ಣ, ಪೆರುಮುಂಡ ಜಯಪ್ರಕಾಶ್,ಪೆರಾಜೆ ಪಂಚಾಯತ್ ಸದಸ್ಯರಾದ ಉದಯ ಕುಮಾರ್, ಶುಭಾಶ್ ಚಂದ್ರ, ಎಂ. ಎಸ್. ನವೀನ ಸಹಕಾರಿ ಪತ್ತಿನ ಬ್ಯಾಂಕ್ ಉಪಾಧ್ಯಕ್ಷ ಪಿ. ಎಂ. ಅಶೋಕ, ಕೂರ್ನಡ್ಕ ಶಾಂತರಾಮ್ ಭಟ್, ಎನ್.ಎ ಜಿತೇಂದ್ರ ಉಪಸ್ಥಿತರಿದ್ದರು. ಕೊಳಂಗಾಯ ಹರೀಶ್ ಅವರು ಸ್ವಾಗತಿಸಿ, ಪ್ರಾಸ್ತವಿಕ ಮಾತು ಆಡಿದರು. ಕೊನೆಯಲ್ಲಿ ಮಲೆನಾಡು ಜಂಟಿ ಕ್ರಿಯಾ ಸಮಿತಿಯ ಉಪಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ವಂದಿಸಿದರು.
ಕುಂಬಳಚೇರಿ : ಪಾಣತ್ತೂರು -ಪೆರಾಜೆ ರಾಷ್ಟ್ರೀಯ ಹೆದ್ದಾರಿಯ ಅಭಿವ್ರದ್ದಿ ಯೋಜನೆಗೆ ಭೂ ಮಾಲೀಕರ ಒಪ್ಪಿಗೆ ಪಡೆಯು ಸಭೆ



































