ಸುಳ್ಯ ತಾಲೂಕಿನ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಓರ್ವನಾಗಿರುವ ಉಪ್ಪಿನಂಗಡಿ 34ನೇ ನೆಕ್ಕಿಲಾಡಿಯ ಅಗ್ನಾಡಿ ಮನೆ ನಿವಾಸಿ ಕೆ.ಎ. ಮಸೂದ್ನ ಮನೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ರವಿವಾರ ಭೇಟಿ ನೀಡಿ, ಅಗಸ್ಟ್ 18ರ ಒಳಗಾಗಿ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ನ್ಯಾಯಾಲಯದ ಎರಡನೇ ಬಾರಿಯ ಆದೇಶ ಪ್ರತಿಯನ್ನು ಮನೆಯ ಮುಂಬಾಗಿಲಿಗೆ ಅಂಟಿಸಿದರು.ಈ ಸಂಬಂಧ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಅಗಸ್ಟ್ ನಿಗದಿತ ಗಡುವಿನೊಳಗೆ ನ್ಯಾಯಾಲಯಕ್ಕೆ ಶರಣಾಗತ ರಾಗದಿದ್ದಲ್ಲಿ ಅವರ ಮನೆಯನ್ನು ಜಪ್ತಿ ಮಾಡುವುದಾಗಿಯೂ ತಲೆ ಮರೆಸಿಕೊಂಡಿರುವ ಆರೋಪಿಯ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು ಯಾರಾದರೂ ಮಾಹಿತಿ ನೀಡಿದಲ್ಲಿ ಸೂಕ್ತ ಬಹುಮಾನವನ್ನು ನೀಡಲಾಗು ವುದೆಂದೂ ಘೋಷಿಸಿದರು.34ನೇ ನೆಕ್ಕಿಲಾಡಿಯ ಪ್ರಯಾಣಿಕರ ತಂಗುದಾಣದಲ್ಲಿಯೂ ಆರೋಪಿಗಳ ಶರಣಾಗತಿಗೆ ಸಂಬಂಧಿಸಿದ ನೋಟಿಸನ್ನು ಅಧಿಕಾರಿಗಳು ಅಂಟಿಸಿದ್ದಾರೆ. ಈ ಹಿಂದೆ ಜೂನ್ 28ರಂದು ಇದೇ ರೀತಿ ನಗರದಲ್ಲಿ ಉದ್ಘೋಷಣೆ ಮಾಡಿ ನೋಟಿಸ್ ಅಂಟಿಸಿದ್ದರು. ಅಂದು ಕೇವಲ 2 ದಿನಗಳ ಕಾಲಾವಕಾಶ ನೀಡಿದ್ದರೆ, ಎರಡನೇ ಬಾರಿಯ ನೋಟಿಸ್ನಲ್ಲಿ 1 ತಿಂಗಳಿಗೂ ಹೆಚ್ಚಿನ ಕಾಲಾವಕಾಶ ನೀಡಿದ್ದಾರೆ.ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ರಾಜ್ಯ ಮಟ್ಟದ ನಾಯಕ ಎನಿಸಿದ್ದ ಮಸೂದ್ ಐದನೇ ಆರೋಪಿ ಎಂದು ದಾಖಲಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸುಳಿವು ಲಭಿಸಿದ ದಿನದಿಂದ ಆತ ತಲೆಮರೆಸಿಕೊಂಡಿದ್ದಾನೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿ ಮನೆಗೆ ಎನ್ಐಎ ಭೇಟಿ














































