ಆಲೆಟ್ಟಿ ಗ್ರಾಮದ ಕಲ್ಚರ್ಪೆ ಎಂಬಲ್ಲಿ ಆನೆಯೊಂದು ಏ.12ರಂದು ಬಾವಿಗೆ ತಡರಾತ್ರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲಾಗಿದೆ.
ಕಲ್ಚರ್ಪೆಯ ದಮಯಂತಿ ಎಂಬವರ ಮನೆಯ ಸಮೀಪದ ತೋಟದ ಬಳಿ ಪಾಳು ಬಿದ್ದ ಬಾವಿಯಿದ್ದು, ಅದರ ನೀರು ಬೇಸಿಗೆಯಲ್ಲಿ ಬತ್ತುತ್ತದೆ.ಆಹಾರ ಅರಸಿ ತೋಟದ ಕಡೆಗೆ ಬಂದಿದ್ದ ಆನೆಯ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಸುಮಾರು 20 ವರ್ಷದ ಕಾಡಾನೆಯೊಂದು ಬಾವಿಯೊಳಗೆ ಬಿದ್ದಿದೆ ಎಂದು ಸ್ಥಳಿಯರು ತಿಳಿಸಿದ್ದರು.
ಅರಣ್ಯ ಇಲಾಖೆಯವರು ಹಿಟಾಚಿ ಯಂತ್ರವನ್ನು ತರಿಸಿ ಬಾವಿಯಿಂದ ಆನೆ ಮೇಲಕ್ಕೆ ಬರಲು ದಾರಿ ಮಾಡಿಕೊಟ್ಟರು. ಬೆಳಿಗ್ಗೆ ಆರಂಭವಾದ ರಕ್ಷಣಾ ಕಾರ್ಯಾಚರಣೆ ಸಂಜೆ ಮಧ್ಯಾಹ್ನದ ವರೆಗೂ ಮುಂದುವರಿದಿತ್ತು. ಬಾವಿಯಿಂದ ಮೇಲಕ್ಕೆ ಬಂದ ಆನೆಯು ಕಾಡನ್ನು ಸೇರಿದೆ.
ಎರಡು ದಿನಗಳ ಹಿಂದೆ ಕಲ್ಚರ್ಪೆ ಪರಿಸರದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಆ ಹಿಂಡಿನಲ್ಲೂ ಒಂದು ಮರಿಯಾನೆ ಇತ್ತು. ಆ ಮರಿಯಾನೆಯೇ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ’ ಎಂದು ಹೇಳಲಾಗಿದೆ. ಸದ್ಯ ಅರಣ್ಯ ಇಲಾಖೆ ತಂಡ ಸ್ಥಳದಲ್ಲೇ ಇದ್ದು, ಈ ಪರಿಸರದಲ್ಲಿ ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದೆ.ಸಿಸಿಎಫ್ ಕರಿಕಾಳನಂ, ಡಿಎಫ್ಒ ಆ್ಯಂಟೋನಿ ಮರಿಯಪ್ಪ, ಪ್ರೊಬೆಷನರಿ ಎಸಿಎಫ್ ಸಂಕೇತ್, ಎಸಿಎಫ್ ಪ್ರಶಾಂತ್ ಪೈ ,ಪುತ್ತೂರು ಅರಣ್ಯಾಧಿಕಾರಿ ಕಿರಣ್ ಬಿ.ಎಂ , ಪೋಲಿಸ್ ಉಪನಿರೀಕ್ಷಕ ಸಂತೋಷ್ ಬಿಪಿ , ಅಗ್ನಿಶಾಮಕ ದಳ ಸಿಬ್ಬಂದಿ ಆನೆ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಬಾವಿಗೆ ಬಿದ್ದ ಕಾಡಾನೆ ಹೇಗೆ ಕಾಡು ಸೇರಿತು ಇಲ್ಲಿದೆ ಮಾಹಿತಿ














































