ಆರಂತೋಡು ಗ್ರಾಮ ಪಂಚಾಯತ್ ನ 2026-27 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜುಲೈ 14ರಂದು ಗ್ರಾಮ ಪಂಚಾಯತ್ ನ ಅಮೃತ ಸಭಾವನದಲ್ಲಿ ನಡೆಯಿತು.
ಆಡಳಿತಾಧಿಕಾರಿ ಪ್ರಮೋದ್ ಸಿ.ಎಂ. ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಗ್ರಾಮಸ್ಥರು ಹಲವು ಬೇಡಿಕೆ ಮತ್ತು ಸಮಸ್ಯೆಗಳನ್ನು ಮುಂದಿಟ್ಟರು.
ಬಿಳಿಯಾರು ಮಾಡದಕಾನ ಗ್ರಾಮ ಪಂಚಾಯತ್ ರಸ್ತೆಯ ಕೆಲ ಭಾಗಗಳಲ್ಲಿ ಕಾಂಕ್ರೀಟೀಕರಣ ಮಾಡುವಂತೆ ಕೆ.ಆರ್.ಗಂಗಾಧರ್ ಮನವಿ ಮಾಡಿ ಕಳೆದ ವರ್ಷದ ಕ್ರಿಯಾಯೋಜನೆಯಲ್ಲಿ ಈ ರಸ್ತೆಯ ಅಭಿವ್ರದ್ದಿಗೆ ಅನುದಾನ ಮೀಸಲು ಇಟ್ಟ ಬಗ್ಗೆ ಸಭೆಯ ಗಮನ ಸೆಳೆದ್ದಾಗ ಪಿ.ಡಿ.ಒ ಜಯಪ್ರಕಾಶ್ ಅವರು ಅನುದಾನದ ಕೊರತೆಯಿಂದ ಬಾಕಿಯಾಗಿದೆ ಎಂದು ಹೇಳಿದರು.ಆಗ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆಯವರು 2025-26 ನೇ ಸಾಲಿನಲ್ಲಿ ತಯಾರಿಸಿದ ಕ್ರಿಯಾಯೋಜನೆಯಲ್ಲಿ ಮೀಸಲಿಟ್ಟ ಎಲ್ಲಾ ವಾರ್ಡ್ ನ ರಸ್ತೆ ಕಾಂಕ್ರೀಟೀಕರಣದ ಕಾಮಗಾರಿಗಳನ್ನು ಮುಂದಿನ ಅವಧಿಯಲ್ಲಿ ಕೈಗೆತ್ತಿಕೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಬೇಕೆಂದು ಒತ್ತಾಯಿಸಿದರು.
ತೊಡಿಕಾನದ ಉಪ ವಲಯಾರಣ್ಯಾಧಿಕಾರಿ ವೆಂಕಟೇಶ್ ರವರು ಇಲಾಖಾ ಮಾಹಿತಿ ನೀಡಿದ್ದಾಗ ಕೆ.ಆರ್.ಗಂಗಾಧರ್ ರವರು” ಮಂಗಗಳು ಕೃಷಿಗೆ ವಿಪರೀತ ಹಾನಿ ಮಾಡುತ್ತಿವೆ. ಪರಿಹಾರ ಇದೆಯಾ?” ಎಂದು ಕೇಳಿದರು. ಆಗ ಅದಕ್ಕೆ ಉತ್ತರಿಸಿದ ವೆಂಕಟೇಶ್ ರವರು ” ಪರಿಹಾರ ಪಟ್ಟಿಯಲ್ಲಿ ತೆಂಗಿನ ಮರ ಅಂತ ಇದೆ. ಸೀಯಾಳ, ತೆಂಗಿನಕಾಯಿಗಳು ಹಾನಿಗೊಳಗಾದರೆ ಈಗಿನ ಪರಿಹಾರ ನಿಯಮದಲ್ಲಿ ಪರಿಹಾರ ನೀಡಲು ಅವಕಾಶ ಇಲ್ಲ ಎಂದು ಹೇಳಿದರು. ಬಳಿಕ ಗ್ರಾಮಸಭೆಯಲ್ಲಿ ನಿರ್ಣಯಿಸಿ ಮೇಲಾಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು. ” ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಇಲಾಖೆ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಆರಂತೋಡು ಉಪ ಅರಣ್ಯಾಧಿಕಾರಿ ವಿನಾಯಕ್ ಸಭೆಗೆ ತಿಳಿಸಿದಾಗ, ಜುಬೀರ್ ಅರಂತೋಡು ಸಮೀಪದ ತೊಡಿಕಾನ ರೋಡ್ ನ ಅಪಾಯಕಾರಿ ಮರ ತೆರವಿಗೆ ನಾನು ಈ ಹಿಂದೆ ಅರ್ಜಿ ಕೊಟ್ಟಿದೆ,ಮರ ತೆರವಾಗಿಲ್ಲ.ಏಕೆ ? ಎಂದು ಕೇಳಿದ್ದಾಗ, ಸ್ಥಳ ಮಜರು ನಡೆಸಿ ಮೇಲಾಧಿಕಾಧಿಗಳ ಕಚೇರಿಗೆ ಬರೆಯಲಾಗಿದೆ ಎಂದು ಫಾರೆಸ್ಟರ್ ವಿನಾಯಕ್ ಹೇಳಿದರು.
ಅರಂತೋಡು ಶಾಲೆಯ ಕ್ರೀಡಾಂಣಕ್ಕೆ ಅಗತ್ಯವಾಗಿ ಆವರಣಗೋಡೆ ನಿರ್ಮಾಣ ಮಾಡಬೇಕು.ತಪ್ಪಿದಲ್ಲಿ ಕ್ರೀಡಾಂಗಣ ಅತೀಕ್ರಮಣವಾಗುವ ಆತಂಕ ಇದೆ ಎಂದು ಪ್ರವೀಣ್ ಎಳ್ಪುಕಜೆ ಸಭೆಯ ಗಮನ ಸೆಳೆದರು.
ಅರಂತೋಡು ಕ್ಲಸ್ಟರ್ ಸಿ.ಆರ್.ಪಿ. ಮಮತಾರವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಿ “ಅರಂತೋಡು ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಕಳುಬೈಲು ಶಾಲೆ ಮಕ್ಕಳಿಲ್ಲದೆ ಮುಚ್ಚಿದರೆ ಈ ವರ್ಷ ತೊಡಿಕಾನ ಗ್ರಾಮದ ಪೆತ್ತಾಜೆ ಶಾಲೆ ಮಕ್ಕಳಿಲ್ಲದೆ ಮುಚ್ಚಲ್ಪಟ್ಟಿದೆ ಎಂದು ತಿಳಿಸಿ ಶಾಲೆಗಳಲ್ಲಿ ಶಿಕ್ಷಕರನ್ನು ಎಸ್.ಐ.ಆರ್.ಗೆ ನಿಯೋಜನೆ ಮಾಡಿರುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಕಷ್ಟ ಆಗುತ್ತಿರುವುದಾಗಿ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಕೆ.ಆರ್.ಜಿ. ಯವರು ” ಕೇರಳ ಮಾದರಿಯಲ್ಲಿ ಕಡಿಮೆ ಇರುವ ಶಾಲಾ ಮಕ್ಕಳನ್ನು ವಾಹನ ವ್ಯವಸ್ಥೆ ಮಾಡಿ ಕೇಂದ್ರ ಸ್ಥಾನದ ಶಾಲೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು.ಇದರಿಂದ ಶಿಕ್ಷಕರ ಸಮಸ್ಯೆ ನೀಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ ಎಂದು ಹೇಳಿದರು.
ಮುಚ್ಚಿರುವ ಶಾಲೆಗಳ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸುವ ಸಾಧ್ಯತೆ ಇದ್ದು, ಅದನ್ನು ಕಾಪಾಡಲು ಗ್ರಾಮ ಪಂಚಾಯತ್ ಗೆ ಜವಾಬ್ದಾರಿ ನೀಡುವಂತೆ” ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ ಒತ್ತಾಯಿಸಿದರು.
ಆರಂತೋಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಕೊರತೆ ನೀಗಿಸಲು ಬೋರ್ ವೆಲ್ ಕೊರೆಸಬೇಕೆಂದು ಪ್ರವೀಣ್ ಎಲ್ಪಕಜೆ ಬೇಡಿಕೆ ಮುಂದಿಟ್ಟಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ತಾಲೂಕಿನಲ್ಲಿ ಮಾದರಿ ಸರಕಾರಿ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಆರಂತೋಡು ಶಾಲೆಗೆ ನೀರಿನ ಸಮಸ್ಯೆಯಾಗದ ಹಾಗೆ ವ್ಯವಸ್ಥೆ ಮಾಡಿ ಕೊಡಲಾಗುವುದು’ ಎಂದು ಭರವಸೆ ನೀಡಿದರು. ” ಅರಂತೋಡಿನಲ್ಲಿ ವಿದ್ಯುತ್ ಸಮಸ್ಯೆ ಅತೀಯಾಗಿ ಕಾಡುತ್ತಿದೆ ಎಂದು ಗ್ರಾಮಸ್ಥರು ಗ್ರಾಮ ಸಭೆಯ ಗಮನ ಸೆಳೆದಾಗ ಸಿಬ್ಬಂದಿ ಕೊರತೆಯಿಂದ ಮಳೆಗಾಲದಲ್ಲಿ ಸಮಸ್ಯೆ ಆಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ಸಿಬ್ಬಂದಿಗಳು ನಿಯೋಜನೆ ಮಾಡುತ್ತಾರೆ. ಈಗ ಇರುವ ಸಿಬ್ಬಂದಿಗಳಿಂದ ಗರಿಷ್ಠ ಸರ್ವಿಸ್ ನೀಡುತ್ತಿರುವುದಾಗಿ ಜೂನಿಯರ್ ಇಂಜಿನಿಯರ್ ಪರಶುರಾಮ್ ಸಭೆಗೆ ಹೇಳಿದರು.ಅಲ್ಲದೆ ಗೃಹಜ್ಯೋತಿ ಮರು ನೋಂದಾವಣಿ ಮಾಡಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಗ್ರಾಮ ಆಡಳಿತ ಅಧಿಕಾರಿ ಶ್ರೀನಿವಾಸ್ ರವರು ಕಂದಾಯ ಇಲಾಖೆಯ ಮಾಹಿತಿ ನೀಡಿ ಸಂಧ್ಯಾ ಸುರಕ್ಷಾ, ವಿಧವಾ ವೇತನಗಳು ಹಾಗೂ ಎಸ್.ಐ.ಆರ್. ಬಗ್ಗೆ ಮಾಹಿತಿ ನೀಡಿದರು.
ಬ್ಯಾಂಕ್ ಆಫ್ ಬರೋಡ ಶಾಖೆಯ ಮೆನೇಜರ್ ರಾಮ್ ರವರು ಬ್ಯಾಂಕ್ ವಿಮಾ ಸೌಲಭ್ಯಗಳ ಮಾಹಿತಿ ನೀಡಿದರು.ಅರೋಗ್ಯ ಇಲಾಖೆಯ ಮಾಹಿತಿಯನ್ನು ಗಾನಶ್ರೀ ನೀಡಿದರು.
ಪಶು ಇಲಾಖೆಯ ಮಾಹಿತಿಯನ್ನು ಪಶುಸಖಿ ವಿನೋದ ಮುಂದಿಟ್ಟರು
ಮಾಜಿ ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಪೆತ್ತಾಜೆ ” ಅರಂತೋಡು ಪಶು ಆಸ್ಪತ್ರೆಗೆ ಖಾಯಂ ಡಾಕ್ಟರ್ ನಿಯೋಜನೆ ಮಾಡಬೇಕು”ಔಷಧಿಗಳ ಕೊರತೆ ಇದೆ ಎಂದು ಒತ್ತಾಯಿಸಿದರು.
ಬಿಳಿಯಾರು ನೀರಿನ ಪೈಪ್ ದುರಸ್ಥಿ ಮಾಡುವಂತೆ ಮನಮೋಹನ ಚುಕ್ರಡ್ಕ ಪಂಚಾಯತ್ ಗಮನಕ್ಕೆ ತಂದರು, ಅರಂತೋಡು ಪೇಟೆಯ ಕೆಲ ಮನೆಗಳ ನೀರು ಕೆಸರು ಮಿಶ್ರಿತವಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು. ಪಿ. ಡಿ. ಓ. ರವರು ಎರಡೂ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದರು. ಗ್ರಾಮ ಸಭೆ ಅಧ್ಯಕ್ಷತೆ ವಹಿಸಿದ್ದ ಹಿರಿಯ ತೋಟಗಾರಿಕಾ ನಿರ್ದೇಶಕ ಪ್ರಮೋದ್ ಸಿ. ಎಂ. ರವರು ” ಸರಕಾರ ನಿಗದಿ ಪಡಿಸಿದ ದಿನಾಂಕದ ಒಳಗೆ ಬೆಳೆ ವಿಮೆ ಕಂತು ಪಾವತಿಸಿ ಬೆಳೆ ವಿಮೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು” ಮನವಿ ಮಾಡಿದರು.
ತೊಡಿಕಾನ ಎಡ್ಚಾರ್ ಬಾಳೆಕಜೆ ರಸ್ತೆ ಕೆಸರುಮಯವಾಗಿದ್ದು ಇದನ್ನು ದುರಸ್ತಿ ಮಾಡಬೇಕೆಂದು ರಾಮಕೃಷ್ಣ ಮಯ್ಯ ತೊಡಿಕಾನ ಒತ್ರಾಯಿಸಿದರು.
ಅರಂತೋಡು ಅಂಗಡಿಮಜಲು ಬಾಜಿನಡ್ಕ ರಸ್ತೆ ದುರಸ್ತಿ ಮಾಡಬೇಕೆಂದು ಸುಂದರ ಬಾಜಿನಡ್ಕ ಒತ್ತಾಯಿಸಿದರು.
ಕೋವಿ ಪರವಾನಿಗೆಯನ್ನು ರಿನಿವಲ್ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಕೆ.ಅರ್.ಜಿ ಹೇಳಿದರು.
ಪಿ.ಡಿ.ಒ. ಜಯಪ್ರಕಾಶ್ ಎಂ.ಆರ್. ಗ್ರಾಮಸಭೆಯ ಮಹತ್ವದ ಬಗ್ಗೆ ಪ್ರಾಸ್ತವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಈಶ್ವರ್ ವರದಿ ವಾಚಿಸಿದರು.
ಅರಂತೋಡು : ಪ್ರಥಮ ಹಂತದ ಗ್ರಾಮ ಸಭೆ




































































