ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಕೊಲೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಮುರುಳ್ಯ ತೀವ್ರವಾಗಿ ಖಂಡಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಂಟ್ವಾಳದಲ್ಲಿ ಯುವತಿಯೊಬ್ಬಳನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆಯು ಇಡೀ ಸಮಾಜವೇ ತಲೆತಗ್ಗಿಸುವಂತಹದ್ದಾಗಿದೆ. ಈ ಅಮಾನವೀಯ ಮತ್ತು ರಕ್ಕಸ ಕೃತ್ಯವನ್ನು ನಾನು ತೀವ್ರ ಪದಗಳಲ್ಲಿ ಖಂಡಿಸುತ್ತೇನೆ.
ನಾಗರಿಕ ಸಮಾಜದಲ್ಲಿ ಇಂತಹ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಘಟನೆ ನಡೆದಿರುವುದು ಮಹಿಳೆಯರ ಮತ್ತು ಯುವತಿಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕವನ್ನು ಮೂಡಿಸಿದೆ. ಕಾನೂನಿನ ಭಯವಿಲ್ಲದೆ ಇಂತಹ ಧೈರ್ಯ ತೋರುವ ಅಪರಾಧಿಗಳಿಗೆ ಸಮಾಜದಲ್ಲಿ ಕಠಿಣ ಸಂದೇಶ ರವಾನೆಯಾಗಬೇಕಿದೆ.
ಇಂತಹ ಕೃತ್ಯಗಳು ಮರುಕಳಿಸದಂತೆ ಸರಕಾರ ಮತ್ತು ಗೃಹ ಇಲಾಖೆ ಈ ಘಟನೆಯನ್ನು ಗಂಭಿರವಾಗಿ ಪರಿಗಣಿಸ ಬೇಕು,ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ತನಿಖೆ ಪೂರ್ಣಗೊಳಿಸಬೇಕು.
ಇಂತಹ ಘೋರ ಅಪರಾಧ ಎಸಗಿದ ಆರೋಪಿಗೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣಾತಿಕಠಿಣ ಶಿಕ್ಷೆಯಾಗುವಂತೆ ನ್ಯಾಯಾಲಯದಲ್ಲಿ ಗಟ್ಟಿ ಕಾನೂನು ಹೋರಾಟ ರೂಪಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆ ಹಾಗೂ ಸುರಕ್ಷತೆಗೆ ಕಾನೂನು ಸುವ್ಯವಸ್ಥೆ ಇಲಾಖೆಯು ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು.
ಮೃತ ಯುವತಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವಳ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನನ್ನ ಬೆಂಬಲ ಇರಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಯುವತಿಯ ಕೊಲೆ ಮಾಡಿರುವುದು ಹೇಯ ಮತ್ತು ಅವಮಾನೀಯ ಕೃತ್ಯ : ಶಾಸಕಿ ಭಾಗೀರಥಿ ಮುರುಳ್ಯ




































































