ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಇದನ್ನು ಅರಿತ ನಿರ್ವಾಹಕ ವಿಷ್ಣು ಎಂಬವರು ಬಸ್ ಅನ್ನು ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬಂದು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಡಿ.6ರಂದು ವರದಿಯಾಗಿದೆ.
ಮಂಗಳೂರು ಡಿಪೋಗೆ ಸೇರಿದ ಕೆಎಸ್ಸಾರ್ಟಿಸಿ ಬಸ್ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಸಂದರ್ಭ ಬಸ್ ಕಡಬ ತಾಲೂಕಿನ ಆತೂರಿಗೆ ಬರುತ್ತಿದ್ದಂತೆಯೇ ಬಸ್ಸಿನ ಚಾಲಕ ಗಣಪತಿ ಅವರು ಚಾಲನೆಯ ವೇಗ ಕಡಿಮೆಮಾಡ ತೊಡಗಿದರು. ಇದನ್ನು ಕಂಡು ಸಂಶಯಗೊಂಡ ಬಸ್ ನಿರ್ವಾಹಕ, ಚಾಲಕನ ಹತ್ತಿರ ಬಂದು ಮಾತನಾಡಲು ಪ್ರಯತ್ನಿಸು ವಾಗ ಬಸ್ ಚಾಲಕ ಎದೆನೋವು ಕಾಣಿಸಿಕೊಂಡಿರುವುದು ಅರಿವಾಗಿದ್ದು, ಕೆಲ ಕ್ಷಣಗಳಲ್ಲಿಯೇ ಬಸ್ನ ಚಾಲಕ ಮಾತನಾಡದಂತಹ ಸ್ಥಿತಿಗೆ ತಲುಪಿದರು.
ಕೂಡಲೇ ಅವರನ್ನು ಬಸ್ ನಿಲ್ಲಿಸಲು ತಿಳಿಸಿದ್ದಲ್ಲದೇ, ಅವರನ್ನು ಬಸ್ನ ಸೀಟ್ನಲ್ಲಿ ಮಲಗಿಸಿ ಸಮೀಪದಲ್ಲಿ ಆಸ್ಪತ್ರೆ ಇರದಿರುವುದರಿಂದ ತಾನೇ ಬಸ್ ಅನ್ನು ಚಲಾಯಿಸಿಕೊಂಡು ಬಂದು ಸುಮಾರು ಏಳು ಕಿ.ಮೀ. ದೂರವಿರುವ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತಲುಪಿಸಿದರಲ್ಲದೆ, ಹತ್ತಿರವಿರುವ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಬಳಿಕ ಅವರನ್ನು ಆಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು. ಈ ಬಸ್ನಲ್ಲಿ ಸುಮಾರು 30ರಷ್ಟು ಪ್ರಯಾಣಿಕರಿದ್ದರು. ನಿರ್ವಾಹಕನ ತಕ್ಷಣದ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ
ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಪ್ರಯಾಣದ ವೇಳೆ ಚಾಲಕನಿಗೆ ಎದೆನೋವು: ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ ಕಂಡೆಕ್ಟರ್





































































