ಪಂಜ, ಸೆ.13: ಗಣೇಶ ಚತುರ್ಥಿಯ ಪ್ರಯುಕ್ತ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಕಾರ್ಯಕ್ರಮ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ದೇವಸ್ಥಾನದ ಧಾರ್ಮಿಕ ಸಂಪ್ರದಾಯದಂತೆ ನಡೆದ ಕದಿರು ತೆಗೆಯುವ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಯಿಲಪ್ಪ ಗೌಡ ಎಂ. ಎಣ್ಮೂರು, ಸಂತೋಷ್ ಕುಮಾರ್ ರೈ, ಪಂಜ ಪಂಚಶ್ರೀ ಜೆ.ಸಿ. ಅಧ್ಯಕ್ಷ ದೇವಿ ಪ್ರಸಾದ್ ಚಿಕ್ಮುಳ್ಳಿ, ಕೃಷ್ಣ ಭಟ್ ಮಡಪ್ಪಾಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.
ಗಣೇಶ ಚತುರ್ಥಿಯ ಅಂಗವಾಗಿ ಕದಿರು ತೆಗೆಯುವ ಸಂಪ್ರದಾಯವು ಕ್ಷೇತ್ರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿತು. ಭಕ್ತರು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸೆ.14ರಂದು ಕದಿರು ವಿತರಣೆ
ನಾಳೆ (ಸೆ.14) ದೇವಸ್ಥಾನದಲ್ಲಿ ಪೂಜೆ ನೆರವೇರಿದ ತಕ್ಷಣ ಭಕ್ತಾದಿಗಳಿಗೆ ಕದಿರು ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ಅಪ್ಪಕಜ್ಜಾಯ ಸೇವೆ ಕೂಡ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಕದಿರು ತೆಗೆಯುವ ಮೂಲಕ ಗಣೇಶ ಚತುರ್ಥಿಗೆ ಪಂಜ ಪಂಚಲಿಂಗೇಶ್ವರ ಕ್ಷೇತ್ರ ಸಜ್ಜು

























