ಸುಳ್ಯ: ಸುಳ್ಯ ತಾಲೂಕು ಮಿಲಾದ್ ಸಮಿತಿಯವರು ವಿನಯ್ ಕುಮಾರ್ ಕಂದಡ್ಕ ಅವರ ಹೇಳಿಕೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯನ್ನು ಗಮನಿಸಿದಾಗ ಗಲಿಬಿಲಿಯಾಯಿತು. ಕಂದಡ್ಕ ಅವರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಮೂರು–ನಾಲ್ಕು ಬಾರಿ ಓದಿದ್ದರೂ, ಅದರಲ್ಲಿ ಅಸಹಜವಾದ ಅಥವಾ ಕೋಮು ಸೌಹಾರ್ದಕ್ಕೆ ಧಕ್ಕೆ ತಂದು ಅಶಾಂತಿ ಸೃಷ್ಟಿಸುವಂತಹ ಯಾವುದೇ ಅಂಶ ಕಂಡುಬರಲಿಲ್ಲ ಎಂದು ಬಿಜೆಪಿ ಸುಳ್ಯ ಮಂಡಲದ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಮೊನ್ನೆ ಸಂಜೆ 4ರಿಂದ 7 ಗಂಟೆಯವರೆಗೆ ಟ್ರಾಫಿಕ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿರುವುದು ಸತ್ಯ. ಕಂದಡ್ಕ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಸಂಚಾರ ನಿರ್ವಹಣೆಯಲ್ಲಿ ಉಂಟಾದ ಲೋಪವನ್ನು ಮಾತ್ರ ಎತ್ತಿ ಹಿಡಿದಿದ್ದಾರೆ. ಸುಳ್ಯ ಠಾಣೆಯ ಉಪನಿರೀಕ್ಷಕರೂ ಸಂಚಾರ ವ್ಯವಸ್ಥೆಯಲ್ಲಿ ಕೊರತೆಯಾಗಿರುವುದನ್ನು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಸಾರ್ವಜನಿಕರಿಗೆ ಉಂಟಾದ ತೊಂದರೆಗೆ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸದೆ, ಇಡೀ ಘಟನೆಯನ್ನು ಕೋಮು ಸೌಹಾರ್ದತೆಯ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಸುಬೋಧ್ ಶೆಟ್ಟಿ ಹೇಳಿದ್ದಾರೆ.
ಮಿಲಾದ್ ಸಮಿತಿಯವರು ತಮ್ಮನ್ನು ಸೌಹಾರ್ದತೆಯ ಪ್ರತಿಪಾದಕರಂತೆ ಬಿಂಬಿಸಿಕೊಂಡು, ವಿನಯ್ ಕುಮಾರ್ ಕಂದಡ್ಕ ಅವರ ಹೇಳಿಕೆಗೆ ಕೋಮು ಬಣ್ಣ ಹಚ್ಚುತ್ತಿರುವುದು ಹಾಸ್ಯಾಸ್ಪದ. ಮಿಲಾದ್ ಸಮಿತಿ, ಎಸ್ಡಿಪಿಐ ಹಾಗೂ ಕೆಲವರ ಹೇಳಿಕೆಗಳನ್ನು ಗಮನಿಸಿದಾಗ, ಮೊನ್ನೆ ನಡೆದ ಸಂಚಾರ ಅವ್ಯವಸ್ಥೆ ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿತ್ತೇ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಹೇಳಿದ್ದಾರೆ.
ತಮ್ಮನ್ನು ಎಲ್ಲರೂ ಸಹಿಸಿಕೊಳ್ಳುತ್ತಾರೆ ಎಂಬ ಮಾನಸಿಕತೆಯಿಂದ ಹೊರಬರುವುದು ಒಳ್ಳೆಯದು. ಇಂತಹ ಬೆಳವಣಿಗೆಗಳನ್ನು ಎದುರಿಸಲು ಹಿಂದೂ ಸಮಾಜವೂ ಸಿದ್ಧವಿದೆ. ಅಧಿಕಾರಿಗಳು ಕೂಡಾ ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ.
‘ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಪ್ರಶ್ನಿಸುವುದೇ ಕೋಮು ಬಣ್ಣವೇ?’ – ಸುಬೋಧ್ ಶೆಟ್ಟಿ ಮೇನಾಲ ಪ್ರಶ್ನೆ!

























