ಸುಳ್ಯ: ಪರಿಸರ ಕಾಳಜಿ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ‘ಸಸ್ಟೇನಬಲ್ ಸಿಪ್ಪಿಂಗ್ ದಿನದ’ ಅಂಗವಾಗಿ ಸುಳ್ಯ ತಾಲೂಕಿನ ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದವರಿಗೆ ಮರುಬಳಕೆ ಮಾಡಬಹುದಾದ ಸ್ಟೇನ್ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ಸುಳ್ಯದ ಅಂಬ್ಯುಲೆನ್ಸ್ ನಿಲ್ದಾಣದಲ್ಲಿ ವಿತರಿಸಲಾಯಿತು.
ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು,
ಈ ಸಂದರ್ಭದಲ್ಲಿ ಮಾತನಾಡಿದ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ JFM ಲತಾಶ್ರೀ ಸುಪ್ರೀತ್ ಮೊಂಟಡ್ಕ ಅವರು, “ಅಂಬ್ಯುಲೆನ್ಸ್ ಚಾಲಕರು ತುರ್ತು ಸಂದರ್ಭಗಳಲ್ಲಿ ಜನರ ಜೀವ ಉಳಿಸುವ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಆರೋಗ್ಯದ ಕಾಳಜಿಯ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ನೆನಪಿಸುವ ಉದ್ದೇಶದಿಂದ ಈ ಸಣ್ಣ ಪ್ರಯತ್ನ ಮಾಡಲಾಗಿದೆ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿ, ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ಬಳಸುವ ಅಭ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಸಿದ್ಧಿಕ್ ಅವರು ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಅಂಬ್ಯುಲೆನ್ಸ್ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಚಾಲಕರು, ಹಾಗೂ ಜೇಸಿಐ ಸುಳ್ಯ ಪಯಸ್ವಿನಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯ ತಾಲೂಕಿನ ಅಂಬ್ಯುಲೆನ್ಸ್ ಚಾಲಕ ಮಾಲಕರಿಗೆ ಸಸ್ಟೆನೆಬಲ್ ಸ್ಟೀಲ್ ಬಾಟಲ್ ವಿತರಣೆ




















